‘ಷರತ್ತು ಬದ್ಧ ಮಾತುಕತೆ’ಗೆ ರೈತರ ನಕಾರ

ನವದೆಹಲಿ: ಕೃಷಿಯ ಮೂರು ತಿದ್ದುಪಡಿ ಕಾಯ್ದೆಗಳ ವಾಪಸಾತಿಗೆ ಆಗ್ರಹಪಡಿಸಿ ಏಳು ತಿಂಗಳಿನಿಂದ ಪ್ರತಿಭಟಿಸುತ್ತಿರುವ ರೈತರು, ‘ಷರತ್ತುಬದ್ಧ ಮಾತುಕತೆ’ಗೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ ಮನವಿಯನ್ನು ಶುಕ್ರವಾರ ತಳ್ಳಿಹಾಕಿದ್ದಾರೆ.
‘ಸರ್ಕಾರ ಈಗ ಷರತ್ತುಬದ್ಧ ಮಾತುಕತೆ ಬಯಸುತ್ತಿದೆ. ನಮಗೆ ಇಂತಹ ಷರತ್ತುಗಳು ಬೇಕಾಗಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಯಾಯತ್ ಸ್ಪಷ್ಟಪಡಿಸಿದರು.
ಸಂಸತ್ತಿನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ತಿದ್ದುಪಡಿಯಾದ ಮೂರು ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ರೈತರು ಮೋದಿ ಸರ್ಕಾರದ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದರು.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಈಗ ₹ 1 ಲಕ್ಷ ಕೋಟಿಯಷ್ಟು ಕೃಷಿ ಮೂಲಸೌಕರ್ಯ ನಿಧಿ ಹೊಂದಲು ಅರ್ಹವಾಗಿವೆ ಎಂದು ಗುರುವಾರ ಪ್ರಕಟಿಸಿದ್ದರು.
ಈ ಮೊತ್ತವನ್ನು ಎಪಿಎಂಸಿಗಳ ಅಭಿವೃದ್ಧಿಗೆ ಬಳಸಲಾಗುವುದು. ಹೀಗಾಗಿ, ಎಪಿಎಂಸಿಗಳು ಬಂದ್ ಆಗಲಿವೆ ಎಂಬ ಆತಂಕ ಅನಗತ್ಯ ಎಂದು ತೋಮರ್ ಪ್ರತಿಪಾದಿಸಿದ್ದರು. ಇದು, ಎಪಿಎಂಸಿ ಬಲಪಡಿಸುವ ಮೋದಿ ಸರ್ಕಾರದ ಚಿಂತನೆಯನ್ನು ಬಿಂಬಲಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಆದರೆ, ಕೃಷಿಕರ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರದ ವಾದವನ್ನು ತಳ್ಳಿಹಾಕಿದ್ದು, ಖಾಸಗಿ ಮಾರುಕಟ್ಟೆಗಳಿಗೆ ಅವಕಾಶ ನೀಡುವುದರಿಂದ ಎಪಿಎಂಸಿಗಳು ಅಷ್ಟು ವಹಿವಾಟು ನಡೆಸಲು ಆಗುವುದಿಲ್ಲ ಎಂದು ಹೇಳಿದ್ದರು. ಮಧ್ಯಪ್ರದೇಶದಲ್ಲಿಯೇ 38 ಎಪಿಎಂಸಿಗಳು ಈ ಹಂಗಾಮಿನಲ್ಲಿ ಒಂದು ಕ್ವಿಂಟಾಲ್ ಗೋಧಿ ವಹಿವಾಟನ್ನೂ ನಡೆಸಿಲ್ಲ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.