ಮುಂಬೈ(ಪಿಟಿಐ): ‘ಬೆದರಿಕೆ ಇದ್ದರೆ ಪೊಲೀಸರಿಗೆ ದೂರು ಕೊಡಿ’ ಎಂದು ಪುಣೆಯ ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆದಾರ್ ಪೂನಾವಾಲಾ ಅವರಿಗೆ ಗೃಹ ಖಾತೆ ರಾಜ್ಯ ಸಚಿವ ಶಂಬುರಾಜೆ ದೇಸಾಯಿ ಹೇಳಿದ್ದಾರೆ.
ಪೂನಾವಾಲಾ ಅವರು ತಮಗೆ ಬೆದರಿಕೆ ಹಾಕಿದವರ ಕರೆಯ ವಿವರವನ್ನು ನೀಡಿದರೆ, ರಾಜ್ಯ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
‘ದಿ ಟೈಮ್ಸ್’ ಪತ್ರಿಕೆಗೆ ಪೂನಾವಾಲಾ ಅವರು ನೀಡಿದ್ದ ಸಂದರ್ಶನದಲ್ಲಿ, ಲಸಿಕೆ ಪೂರೈಸುವ ಕುರಿತು ಭಾರತದಲ್ಲಿ ಕೆಲ ಪ್ರಭಾವಿಗಳು ಪದೇ ಪದೇ ಬೆದರಿಕೆಯ ಕರೆಗಳನ್ನು ಮಾಡುತ್ತಿರುವ ಕುರಿತೂ ಹೇಳಿಕೊಂಡಿದ್ದರು.
ಪೂನಾವಾಲಾ ಅವರು ಭಾರತಕ್ಕೆ ಮರಳುವಂತೆ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರು ಒತ್ತಾಯಿಸಿದ್ದು, ‘ನಿಮ್ಮ ಸುರಕ್ಷತೆಯ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿಕೊಳ್ಳಲಿದೆ’ ಎಂದು ಹೇಳಿದ್ದಾರೆ.