ನವದೆಹಲಿ: ‘ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ಹೆಚ್ಚುವರಿಯಾಗಿ ₹16,728 ಕೋಟಿ ಸಾಲ ಪಡೆಯಬಹುದು’ ಎಂದು ಕೇಂದ್ರ ಹಣಕಾಸು ಸಚಿವಾಲಯವು ಭಾನುವಾರ ಹೇಳಿದೆ.
ಜಿಲ್ಲಾ ಮಟ್ಟದ ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ ಸೇರಿದಂತೆ ಹಲವು ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಂಡ ರಾಜ್ಯಗಳಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಲು ಸಚಿವಾಲಯವು ಮೇ ತಿಂಗಳಲ್ಲಿ ನಿರ್ಧರಿಸಿತ್ತು.
‘ಈ ಐದು ರಾಜ್ಯಗಳು ಸುಲಲಿತ ವ್ಯಾಪಾರಕ್ಕೆ ಅಗತ್ಯವಿದ್ದ ಸುಧಾರಣಾ ಕ್ರಮಗಳನ್ನು ಕೈಗೊಂಡಿವೆ. ಹೀಗಾಗಿ ಮುಕ್ತ ಮಾರುಕಟ್ಟೆಯ ಮೂಲಕ ₹16,728 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಕೋವಿಡ್–19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಗಳ ಆರ್ಥಿಕ ವೃದ್ಧಿ ದರ (ಜಿಎಸ್ಡಿಪಿ) ಮೊತ್ತದ ಶೇಕಡ 5ರಷ್ಟು ಪ್ರಮಾಣದ ಸಾಲ ಪಡೆದುಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡುವುದಾಗಿಸಚಿವಾಲಯವು ಮೇ ತಿಂಗಳಲ್ಲಿ ತಿಳಿಸಿತ್ತು. ಅದಕ್ಕೂ ಮುನ್ನ ರಾಜ್ಯಗಳ ಜಿಡಿಪಿಯ ಶೇ 3ರಷ್ಟು ಮೊತ್ತವನ್ನು ಮಾತ್ರ ಸಾಲ ಪಡೆಯಲು ಅವಕಾಶ ಕೊಡಲಾಗಿತ್ತು.
ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು 2020ರ ಫೆಬ್ರುವರಿ 15ರೊಳಗೆ ‘ಒಂದು ದೇಶ–ಒಂದು ಪಡಿತರ’ ಯೋಜನೆಯ ಅನುಷ್ಠಾನದ ಜೊತೆಗೆ ನಗರ ಸ್ಥಳೀಯ ಸಂಸ್ಥೆ ಹಾಗೂ ವಿದ್ಯುತ್ ವಲಯದಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಬೇಕಿತ್ತು. ಅಲ್ಲದೆ ಮುಕ್ತ ವ್ಯಾಪಾರ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಷರತ್ತನ್ನೂ ವಿಧಿಸಲಾಗಿತ್ತು.
‘ಇದುವರೆಗೂ 10 ರಾಜ್ಯಗಳು ‘ಒಂದು ದೇಶ–ಒಂದು ಪಡಿತರ’ ಯೋಜನೆಯನ್ನು ಅನುಷ್ಠಾನಗೊಳಿಸಿವೆ. ಐದು ರಾಜ್ಯಗಳು ಮುಕ್ತ ವ್ಯಾಪಾರದ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿವೆ. ಎರಡು ರಾಜ್ಯಗಳು ನಗರ ಸ್ಥಳೀಯ ಸಂಸ್ಥೆಗಳ ಸುಧಾರಣೆಯನ್ನು ಕೈಗೊಂಡಿವೆ’ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.