ನವದೆಹಲಿ: ಮಹಾರಾಷ್ಟ್ರ, ಛತ್ತೀಸಗಡ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಶೇ 70.82ರಷ್ಟು ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ 11 ಲಕ್ಷ ಪ್ರಕರಣಗಳು ಇವೆ.
ಮಹಾರಾಷ್ಟ್ರವೊಂದರಲ್ಲೇ ಶೇ 48.57ರಷ್ಟು ಪ್ರಕರಣಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಐದು ರಾಜ್ಯಗಳಲ್ಲದೆ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಸೋಂಕಿನ ಪ್ರಮಾಣ ಅಧಿಕವಾಗುತ್ತಿದೆ.
ಸೋಂಕು: ಏನು.. ಎತ್ತ..
*ತಮಿಳುನಾಡಿನ ಅರವಕ್ಕುರಿಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಕೋವಿಡ್ ದೃಢಪಟ್ಟಿದೆ.
*ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಜನರು ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬರಬೇಕು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ
*ರೆಮ್ಡಿಸಿವಿರ್ ಇಂಜೆಕ್ಷನ್ ಸರಾಗ ಪೂರೈಕೆಗೆ ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಔಷಧಿಯ ಕಾಳಸಂತೆ ಮಾರಾಟ ತಡೆಯಲು ಮುಂದಾಗಿದೆ
*ಮಹಾರಾಷ್ಟ್ರವು 1 ಕೋಟಿ ಕೋವಿಡ್ ತಡೆ ಲಸಿಕೆ ಮೈಲುಗಲ್ಲು ತಲುಪಿದೆ. ಈವರೆಗೆ ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ
*ಕೋವಿಡ್ ಮೂರನೇ ಅಲೆ ತಡೆಯಲು ವೇಗವಾಗಿ ಲಸಿಕೆ ಕಾರ್ಯಕ್ರಮ ನಡೆಸಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅಭಿಪ್ರಾಯಪಟ್ಟಿದ್ದಾರೆ