ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿದ್ದು, ಅಪರೂಪದ ನಡೆ ಎಂಬಂತೆ ಒಬ್ಬ ಉಗ್ರ ಶರಣಾಗಿದ್ದಾನೆ.
ಉಗ್ರ ಸಂಘಟನೆಯಾದ ಅಲ್–ಬದರ್ನ ಜಿಲ್ಲಾ ಕಮಾಂಡರ್ ಶಕೂರ್ ಪರ್ರೆ ಹಾಗೂ ಇತ್ತೀಚೆಗಷ್ಟೇ ಖಾನ್ಮೊಹ್ ಪ್ರದೇಶದ ಬಿಜೆಪಿಯ ಪಂಚಾಯಿತಿ ಸದಸ್ಯರೊಬ್ಬರನ್ನು ಅಪಹರಿಸಿ ನಂತರ ಹತ್ಯೆ ಮಾಡಿದ್ದ ಉಗ್ರ ಸುಹೈಲ್ ಭಟ್ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಜಿಲ್ಲೆಯ ಕಿಲೂರಾ ಪ್ರದೇಶದಲ್ಲಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಉಗ್ರರು ಮೃತಪಟ್ಟಿದ್ದಾರೆ.
‘ಓಬ್ಬ ಉಗ್ರ ಶರಣಾಗಿದ್ದು, ಎರಡು ಎ.ಕೆ. ರೈಫಲ್, ಮೂರು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದರು.