ಪಣಜಿ: ಎರಡು ತಿಂಗಳ ಹಿಂದೆಯಷ್ಟೇ ಆಮ್ಲಜನಕದ ಕೊರತೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಈಗ ಉಲ್ಟಾ ಹೊಡೆದಿದ್ದಾರೆ. ‘ಅಂಥ ಯಾವುದೇ ಸೌಲಭ್ಯಗಳ ಕೊರತೆ ಎದುರಾಗಿಲ್ಲ, ಸಾವುಗಳೂ ಸಂಭವಿಸಿಲ್ಲ‘ ಎಂದು ಹೇಳಿದ್ದಾರೆ.
ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದ ಸಚಿವ ವಿಶ್ವಜಿತ್, ‘ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಆಮ್ಲಜನಕದ ಕೊರತೆಯಿಂದ ಒಬ್ಬ ಕೋವಿಡ್ ರೋಗಿಯೂ ಸಾವಿಗೀಡಾಗಿಲ್ಲ‘ ಎಂದು ತಿಳಿಸಿದ್ದಾರೆ.
ಸದನದಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ ದಿಗಂಬರ್ ಕಾಮತ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ‘ಜಿಎಂಸಿಎಚ್ನಲ್ಲಿ ಯಾವುದೇ ಸಮಯದಲ್ಲೂ ಆಮ್ಲಜನಕದ ಕೊರತೆ ಎದುರಾಗಿಲ್ಲ. ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಸಾವಿಗೀಡಾಗಿರುವ ವರದಿಯಾಗಿಲ್ಲ‘ ಎಂದು ಹೇಳಿದರು.
ಆದರೆ, ಇದೇ ಆರೋಗ್ಯ ಸಚಿವರು ಮೇ 11 ರಂದು ‘ಜಿಎಂಸಿಎಚ್ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ 24 ಗಂಟೆಗಳಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ‘ ಎಂದು ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.