ನವದೆಹಲಿ: ‘ಕೋವಿಡ್ ಲಸಿಕೆ ವಿಷಯದಲ್ಲಿ ಜನರು ಸ್ವಾವಲಂಬಿ ಆಗಬೇಕು. ಕೇಂದ್ರ ಸರ್ಕಾರ, ಟ್ವಿಟರ್ನ ಬ್ಲೂಟಿಕ್ ಬ್ಯಾಡ್ಜ್ಗಾಗಿ ಹೋರಾಟ ನಡೆಸಿದೆ’ ಎಂದು ಕಾಂಗ್ರೆಸ್ ಮುಖಂಡರ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಟ್ವಿಟರ್ ಆಡಳಿತವು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ ಉನ್ನತ ನಾಯಕರ ಖಾತೆಯಿಂದ ಬ್ಲೂಟಿಕ್ ಗುರುತು ತೆಗೆದ ಗೊಂದಲ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ.
ನಿಯಮಗಳ ಅನುಸಾರ ಆರು ತಿಂಗಳು ಯಾವುದೇ ಖಾತೆ ನಿಷ್ಕ್ರಿಯವಾಗಿದ್ದರೆ, ಸ್ವಯಂಚಾಲಿತವಾಗಿ ಬ್ಲೂ ಟಿಕ್ ಗುರುತನ್ನು ತೆಗೆಯಲಾಗುತ್ತದೆ ಎಂದು ಟ್ವಿಟರ್ ಪ್ರತಿಕ್ರಿಯಿಸಿದೆ.
ಮೋದಿ ಸರ್ಕಾರ ಈಗ ಬ್ಲೂ ಟಿಕ್ ಗುರುತಿಗಾಗಿ ಹೋರಾಟ ನಡೆಸಿದೆ. ನಿಮಗೆ ಕೋವಿಡ್ ಲಸಿಕೆ ಬೇಕಿದ್ದಲ್ಲಿ ಸ್ವಾವಲಂಬಿಯಾಗಿ ಎಂದು ಟ್ವೀಟ್ ಮಾಡಿದ್ದಾರೆ.
ब्लू टिक के लिए मोदी सरकार लड़ रही है- कोविड टीका चाहिए तो आत्मनिर्भर बनो!#Priorities
ಬಿಜೆಪಿ ತಿರುಗೇಟು: ಕೋವಿಡ್ ಲಸಿಕೆ ಕುರಿತಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣದಿಂದ ಹೊರಬಂದು ವಾಸ್ತವ ಸ್ಥಿತಿ ಅರಿಯಬೇಕು ಎಂದು ಬಿಜೆಪಿ ತಿರುಗೇಟು ನೀಡಿದೆ.
ಲಸಿಕೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಲಸಿಕೆ ಅಕ್ರಮ ಕುರಿತಂತೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚಿಸಲಿ ಎಂದು ಸಲಹೆ ಮಾಡಿದೆ.
ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರು, ಟ್ವಿಟರ್ನಲ್ಲಿ ರಾಜಕಾರಣ ಮಾಡುವುದು ರಾಹುಲ್ ಗಾಂಧಿ ಅವರಿಗೆ ಮಹತ್ವದ ವಿಷಯ. ಲಸಿಕೆ ವಿಷಯದಲ್ಲಿ ಮೋದಿ ಸರ್ಕಾರ ಗಮನಾರ್ಹ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.