ಅಹಮದಾಬಾದ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಳಿಕ ಕಾಂಗ್ರೆಸ್ನ ಗುಜರಾತ್ ಘಟಕದ ಅಧ್ಯಕ್ಷ ಅಮಿತ್ ಚಾವ್ಡಾ ಹಾಗೂ ಶಾಸಕಾಂಗ ಪಕ್ಷದ ನಾಯಕ ಪರೇಶ್ ಧನಾನಿ ರಾಜೀನಾಮೆ ನೀಡಿದ್ದಾರೆ.
ಜನರು ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ತನಿಖೆಯಾಗಬೇಕು ಎಂದು ಅಮಿತ್ ಚಾವ್ಡಾ ಆಗ್ರಹಿಸಿದ್ದಾರೆ.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಚುನಾವಣೆ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಅಮಿತ್ ತಿಳಿಸಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಎಲ್ಲ 31 ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ಜಯ ಗಳಿಸಿದೆ. 81 ಪಾಲಿಕೆಗಳ ಪೈಕಿ 70ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 231 ತಾಲ್ಲೂಕು ಪಂಚಾಯಿತಿಗಳಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ಗಿಂತ ಮುನ್ನಡೆ ಸಾಧಿಸಿದೆ.
ಈವರೆಗೆ ಫಲಿತಾಂಶ ಘೋಷಣೆಯಾದ 8,474 ಸ್ಥಾನಗಳ ಪೈಕಿ ಬಿಜೆಪಿ 6,110ರಲ್ಲಿ ಜಯ ಗಳಿಸಿದೆ.
ಕಾಂಗ್ರೆಸ್ ಕೇವಲ 1,768ರಲ್ಲಿ ಗೆದ್ದಿದ್ದು, ಕೇವಲ 3 ಪಾಲಿಕೆಗಳಲ್ಲಿ ಗೆಲುವು ಸಾಧಿಸಿದೆ. ಜಿಲ್ಲಾ ಪಂಚಾಯಿತಿಗಳಲ್ಲಿ ಖಾತೆ ತೆರೆಯುವುದೇ ಪಕ್ಷಕ್ಕೆ ಸಾಧ್ಯವಾಗಿಲ್ಲ. ಕೆಲವೇ ತಾಲ್ಲೂಕು ಪಂಚಾಯಿತಿಗಳಲ್ಲಿ ಜಯ ಗಳಿಸುವುದಷ್ಟೇ ಪಕ್ಷಕ್ಕೆ ಸಾಧ್ಯವಾಗಿದೆ.
‘ಚುನಾವಣೆ ಫಲಿತಾಂಶವು ನಮ್ಮ ನಿರೀಕ್ಷೆಗಿಂತ ಸಂಪೂರ್ಣ ಭಿನ್ನವಾಗಿದೆ. ಪ್ರಚಾರದ ವೇಳೆ ಜನರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಆದರೆ ಫಲಿತಾಂಶದಲ್ಲಿ ಅದು ಕಾಣಿಸುತ್ತಿಲ್ಲ. ಜನರು ಇವಿಎಂ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಎಲ್ಲ ವಿಚಾರಗಳೂ ತನಿಖೆಯಾಗಲಿ’ ಎಂದು ಅಮಿತ್ ಹೇಳಿದ್ದಾರೆ.
ಇಬ್ಬರು ನಾಯರು ರಾಜೀನಾಮೆ ನೀಡಿರುವುದು ನಿಜ. ಆ ಬಗ್ಗೆ ಪಕ್ಷದ ಉನ್ನತ ನಾಯಕತ್ವ ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.