ಚಂಡೀಗಡ: ಗಣೇಶ ಮೂರ್ತಿಗಳನ್ನುವಿಸರ್ಜನೆ ಮಾಡುವ ಸಂದರ್ಭದಲ್ಲಿ 6 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹರಿಯಾಣದ ಮಹೇಂದರ್ಗಢ ಹಾಗೂ ಸೋನಿಪತ್ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಹೇಂದರ್ಗಢದಲ್ಲಿ 7 ಅಡಿಯ ಗಣೇಶ ವಿಸರ್ಜನೆ ಮಾಡುವಾಗ 9 ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ನೆರವಿನೊಂದಿಗೆ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡು, 5 ಮಂದಿ ಯುವಕರನ್ನು ರಕ್ಷಿಸಿದೆ. ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಸೋನಿಪತ್ ಜಿಲ್ಲೆಯ ಯಮುನಾ ನದಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.