ನವದೆಹಲಿ: ಹಾಥರಸ್ ಘಟನೆಯಲ್ಲಿ ಸಂತ್ರಸ್ತೆಗೆ ಅಪಮಾನ ಆಗುವಂತೆ ಬಿಜೆಪಿ ಚಿತ್ರಣವನ್ನು ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ‘ಸಂತ್ರಸ್ತೆಗೆ ಈಗ ಬೇಕಾಗಿರುವುದು ಅಪಪ್ರಚಾರವಲ್ಲ, ನ್ಯಾಯ’ ಎಂದೂ ಪ್ರತಿಪಾದಿಸಿದ್ದಾರೆ.
‘ಮಹಿಳೆಯ ವಿರುದ್ಧ ಆಗಿರುವ ಅಪರಾಧಕ್ಕೆ ಮಹಿಳೆಯೇ ಕಾರಣ ಎಂಬರ್ಥದಲ್ಲಿ ಉತ್ತರ ಪ್ರದೇಶದ ಬಿಜೆಪಿಯು ಈಗ ಬಿಂಬಿಸುತ್ತಿದೆ. ಹಾಥರಸ್ನಲ್ಲಿ ಗಂಭೀರ ಸ್ವರೂಪದ ಅಪರಾಧವು ಜರುಗಿದೆ. ಅಲ್ಲಿ 20 ವರ್ಷದ ದಲಿತ ಮಹಿಳೆ ಸತ್ತಿದ್ದಾಳೆ. ಆಕೆಯ ಕುಟುಂಬದ ಸಮ್ಮತಿಯಿಲ್ಲದೇ ಶವದ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಆಕೆಗೆ ನ್ಯಾಯ ಸಲ್ಲಬೇಕಾಗಿದೆ’ ಎಂದು ಅವರು ಹೇಳಿದರು.
ಬಿಜೆಪಿಯದು ನಾಚಿಕೆಗೇಡಿನ ವರ್ತನೆ ಎಂದೂ ಟೀಕಿಸಿದರು. ಕಳೆದ ಶನಿವಾರವಷ್ಟೇ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.