ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ವಿವಾದಾತ್ಮಕ ಹೇಳಿಕೆ ಸಂಬಂಧ ರಾಜ್ಯದ ಆರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಪ್ರತಿ ಎಫ್ಐಆರ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಕೇಂದ್ರ ಸಚಿವ ನಾರಾಯಣ್ ರಾಣೆ ಅವರಿಗೆ ತಿಳಿಸಿದೆ.
ಸಚಿವ ರಾಣೆ ಅವರು ತಮ್ಮ ವಿರುದ್ಧ ಮಹದ್, ನಾಸಿಕ್, ಪುಣೆ, ಥಾಣೆ, ಜಲಗಾಂವ್ ಮತ್ತು ಅಹ್ಮದ್ನಗರದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಒಂದು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದಾರ್ ಅವರ ವಿಭಾಗೀಯ ಪೀಠ, ‘ಪ್ರತಿ ಎಫ್ಐಆರ್ಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದರೆ ಉತ್ತಮ‘ ಎಂದು ಹೇಳಿತು.
ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಹಾಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವುದು ಸೂಕ್ತ. ಇದರಿಂದ ಪ್ರತಿ ಠಾಣೆಯಿಂದಲೂ ಪ್ರತಿಕ್ರಿಯೆ ಪಡೆಯಲು ಸುಲಭವಾಗುತ್ತದೆ ಎಂದು ಪೀಠ ತಿಳಿಸಿತು
ಇದಕ್ಕೆ ಒಪ್ಪಿದ ರಾಣೆ ಪರ ವಕೀಲರಾದ ಅಶೋಕ್ ಮುಂಡರಗಿ ಮತ್ತು ಅನಿಕೇತ್ ನಿಕಮ್, ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವುದಾಗಿ ಹೇಳಿದರು. ಇದೇ ವೇಳೆ ಎಲ್ಲ ಪ್ರಕರಣಗಳಿಂದಲೂ ಮಧ್ಯಂತರ ರಕ್ಷಣೆಯನ್ನು ಕೋರಿದರು.