ಶಿಲ್ಲಾಂಗ್: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಗಡಿವಿವಾದಕ್ಕೆ ಸಂಬಂಧಿಸಿ ಭೌತಿಕ ಬದಲಾವಣೆ, ಗಡಿ ಗುರುತಿಸುವ ಕಾರ್ಯಕ್ಕೆ ಮೇಘಾಲಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದ್ದ 12 ಕಡೆ ಗಡಿ ಗುರುತಿಸುವುದನ್ನು ಕೈಬಿಡುವ ಕುರಿತಂತೆಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಈ ವರ್ಷದ ಆರಂಭದಲ್ಲಿ ಒಡಂಬಡಿಕೆ ಮೂಡಿತ್ತು.
ಮುಂದಿನ ವಿಚಾರಣೆ ನಡೆಯುವ ಫೆ.6, 2023ರವರೆಗೆ ತಡೆಯಾಜ್ಞೆ ಜಾರಿಯಲ್ಲಿರಲಿದೆ. ಅಲ್ಲಿಯವರೆಗೆ ಗಡಿಯಲ್ಲಿ ಯಾವುದೇ ಭೌತಿಕ ಬದಲಾವಣೆ ಮಾಡಬಾರದು ಎಂದು ನ್ಯಾಯಮೂರ್ತಿ ಎಚ್.ಎಸ್. ಥ್ಯಾಂಖ್ಖಿವ್ ಆದೇಶಿಸಿದರು.
ಸ್ಥಳೀಯ ನಾಲ್ವರು ಸಾಂಪ್ರದಾಯಿಕ ಗುಂಪುಗಳ ಮುಖ್ಯಸ್ಥರು ಅರ್ಜಿ ಸಲ್ಲಿಸಿದ್ದು, ‘ಈ ಒಪ್ಪಂದವು ಬುಡಕಟ್ಟು ಪ್ರದೇಶದ ಆಡಳಿತಕ್ಕೆ ಸಂಬಂಧಿಸಿದ ಸಂವಿಧಾನದ 6ನೇ ಪರಿಚ್ಛೇದದ ಉಲ್ಲಂಘನೆ. ಒಪ್ಪಂದಕ್ಕೆ ಮುನ್ನ ಸ್ಥಳೀಯ ಸಾಂಪ್ರದಾಯಿಕ ಗುಂಪುಗಳ ಮುಖಂಡರ ಅಭಿಪ್ರಾಯ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದ್ದರು.
ಮೇಘಾಲಯ ಮತ್ತು ಅಸ್ಸಾಂ ನಡುವೆ 50 ವರ್ಷಗಳಿಂದ ಗಡಿ ವಿವಾದ ಇದೆ. 1972ರಲ್ಲಿ ಅಸ್ಸಾಂ ರಾಜ್ಯವನ್ನು ವಿಭಜಿಸಿ ಹೊಸದಾಗಿ ಮೇಘಾಲಯ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿತ್ತು.