ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
‘ದಕ್ಷಿಣ ಕಾಶ್ಮೀರದ ವಾಂಗಂ ಪ್ರದೇಶದಲ್ಲಿ ಶನಿವಾರ ರಾತ್ರಿ ಎನ್ಕೌಂಟರ್ ನಡೆದಿದೆ. ಈ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮತ್ತು ಲಷ್ಕರ್ ಎ ತಯಬಾಗೆ ಸೇರಿದ ಉಗ್ರರಿಬ್ಬರು ಹತರಾಗಿದ್ದಾರೆ’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ತಿಳಿಸಿದರು.
‘ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯ ಇನಾತುಲ್ಲಾ ಶೇಖ್, ಶೋಪಿಯಾನ್ ಜಿಲ್ಲೆಯ ನಿವಾಸಿ. ಈತ 2018ರಲ್ಲಿ ಶಸ್ತ್ರಾಸ್ತ್ರ ತರಬೇತಿಗೆಂದು ಪಾಕಿಸ್ತಾನಕ್ಕೆ ತೆರಳಿದ್ದ. ಕಳೆದ ವಾರವಷ್ಟೇ ಕಾಶ್ಮೀರಕ್ಕೆ ಮರಳಿದ್ದಾನೆ. ಎನ್ಕೌಂಟರ್ನಲ್ಲಿ ಮೃತಪಟ್ಟ ಮತ್ತೊಬ್ಬ ಉಗ್ರ ಆದಿಲ್ ಮಲೀಕ್ ಅನಂತನಾಗ್ ಜಿಲ್ಲೆಯ ನಿವಾಸಿ’ ಎಂದು ಅವರು ಹೇಳಿದರು.
‘ಘಟನಾ ಸ್ಥಳದಿಂದ ಒಂದು ಎಕೆ–47 ಮತ್ತು ಎಂ4 ರೈಫಲ್ ಹಾಗೂ ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ವರ್ಷ ಭದ್ರತಾ ಪಡೆಯು ಒಟ್ಟು ಎರಡು ಎಂ4 ರೈಫಲ್ ಅನ್ನು ಉಗ್ರರಿಂದ ವಶಕ್ಕೆ ಪಡೆದಿದೆ’ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.