ನವದೆಹಲಿ: ಕೋವಿಡ್–19 ಪ್ರಸರಣದ ಬಗ್ಗೆ ಮಾಹಿತಿ ಕಲೆಹಾಕಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ರಾಷ್ಟ್ರಮಟ್ಟದ ಸಿರೊಲಾಜಿಕಲ್ ಸಮೀಕ್ಷೆ ನಡೆಸಲಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪ್ರೋತ್ಸಾಹಿಸಬೇಕು. ಇದರಿಂದ ಎಲ್ಲ ಪ್ರದೇಶಗಳಲ್ಲಿ ಸೋಂಕಿನ ಪ್ರಸರಣದ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೂ ಜನರು ಮುನ್ನೆಚ್ಚರಿಕೆ ವಹಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.
ಮೇ 7ರಂದು ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣ ಗರಿಷ್ಠ ಮಟ್ಟ ತಲುಪಿತ್ತು. ಆ ಬಳಿಕ ಇದೀಗ ಶೇ 78ರಷ್ಟು ಇಳಿಕೆಯಾಗಿದೆ. ವಾರದ ಪಾಸಿಟಿವಿಟಿ ಪ್ರಮಾಣವೂ ಶೇ 74ರಷ್ಟು ಇಳಿಕೆಯಾಗಿದೆ. ಏಪ್ರಿಲ್ 30 ಹಾಗೂ ಮೇ 6ರ ನಡುವಣ ಅವಧಿಯಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ 21.6ರಷ್ಟಿದ್ದು, ಗರಿಷ್ಠ ಮಟ್ಟದಲ್ಲಿತ್ತು.