ನವದೆಹಲಿ: ‘ಭಾರತವು ಶಾಂತಿ ಪ್ರಿಯ ದೇಶವಾಗಿದ್ದು, ಸ್ವದೇಶಿ ರಕ್ಷಣಾ ಸಾಮರ್ಥ್ಯವು ‘ಬಹುಕಾಲದ ಶಾಂತಿ’ಗೆ ಅಡಿಪಾಯ ಎನ್ನುವುದನ್ನು ನಂಬಿದ ರಾಷ್ಟ್ರವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದರು.
ಪೂರ್ವ ಲಡಾಖ್ ಗಡಿಯಲ್ಲಿಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಸಿಂಗ್ ಈ ಹೇಳಿಕೆ ನೀಡಿದ್ದಾರೆ.ಮುಂಬರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಭಾಗವಾಗಿ ವಿದೇಶಿ ಕಂಪನಿಗಳ ಜೊತೆ ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಮಾತನಾಡಿದ ಸಿಂಗ್, ‘ವಿಶ್ವದಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ನಾವು ಬದ್ಧರಾಗಿದ್ದೇವೆ’ ಎಂದರು.
‘ಅತ್ಯಾಧುನಿಕ ಯುದ್ಧ ವಿಮಾನ, ನ್ಯೂಕ್ಲಿಯರ್ಜಲಾಂತರ್ಗಾಮಿಗಳು, ಯುದ್ಧ ಟ್ಯಾಂಕ್ಗಳು, ಕ್ಷಿಪಣಿಗಳನ್ನು ತಯಾರಿಸುವ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ರಕ್ಷಣೆ ಮತ್ತು ಏರೋಸ್ಪೇಸ್ ವಲಯದಲ್ಲಿ ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ಒಂದಾಗುವತ್ತ ಭಾರತವೂ ಹೆಜ್ಜೆ ಇರಿಸಿದೆ’ ಎಂದರು.