ನವದೆಹಲಿ: ‘ವಿಸ್ತರಣಾವಾದ ಹಾಗೂ ಭಯೋತ್ಪಾದನೆ ವಿರುದ್ಧದ ತನ್ನ ನಿಲುವು, ನೀತಿಯನ್ನು ಜಗತ್ತಿಗೆ ಭಾರತ ಸ್ಪಷ್ಟವಾಗಿ ತಿಳಿಸಿದೆ’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಹೇಳಿದರು.
ಅಂತರ ಸಂಸದೀಯ ಒಕ್ಕೂಟ (ಐಪಿಯು) ಅಧ್ಯಕ್ಷ ಡುವಾರ್ಟ್ ಪಚೆಕೊ ಅವರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಾಗತಿಕ ಶಾಂತಿ ಹಾಗೂ ಸೌಹಾರ್ದಕ್ಕಾಗಿ ಭಾರತ ಶ್ರಮಿಸುತ್ತಲೇ ಬಂದಿದೆ. ಭಯೋತ್ಪಾದನೆ ಮತ್ತು ವಿಸ್ತರಣಾವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ನೀತಿ ಏನು ಎಂಬುದನ್ನು ಸಹ ಭಾರತ ಸ್ಪಷ್ಟಪಡಿಸಿದೆ’ ಎಂದರು.
‘ಒಂದು ದೇಶದ ಚುನಾಯಿತ ಸದಸ್ಯರು ತಮ್ಮ ದೇಶದ ವಿಷಯಗಳಿಗೆ ಸಂಬಂಧಿಸಿ ಅನುಮೋದಿಸಿರುವ ಕಾನೂನುಗಳು, ಸಾರ್ವಭೌಮತೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಮತ್ತೊಂದು ದೇಶದ ಸಂಸತ್ ಚರ್ಚಿಸಬಾರದು’ ಎಂದು ಅವರು ಪರೋಕ್ಷವಾಗಿ ಬ್ರಿಟನ್ಗೆ ಚಾಟಿ ಬೀಸಿದರು.
ನೂತನ ಕೃಷಿ ಕಾಯ್ದೆಗಳ ಕುರಿತು ಇತ್ತೀಚೆಗೆ ಬ್ರಿಟನ್ ಸಂಸದರು ಸಂಸತ್ನಲ್ಲಿ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಬಿರ್ಲಾ ತಿರುಗೇಟು ನೀಡಿದರು.
ಐಪಿಯುನ ಅಧ್ಯಕ್ಷರೂ ಆಗಿರುವ ಪೋರ್ಚುಗಲ್ನ ಸಂಸದ ಪಚೆಕೊ, ‘ಭಾರತ ಐಪಿಯು ಸ್ನೇಹಿ ರಾಷ್ಟ್ರವಾಗಿದೆ. ಸಂಸದೀಯ ರಾಜತಾಂತ್ರಿಕ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದು ಶ್ಲಾಘಿಸಿದರು.
‘ಜಾಗತಿಕ ಆಗುಹೋಗುಗಳಲ್ಲಿ ಭಾರತಕ್ಕೆ ತಕ್ಕ ಸ್ಥಾನ ನೀಡಬೇಕು. ಅದರಲ್ಲೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ನೀಡಬೇಕು ಎಂಬ ಭಾರತದ ಬೇಡಿಕೆಗೆ ಪೋರ್ಚುಗಲ್ ಬೆಂಬಲ ವ್ಯಕ್ತಪಡಿಸುತ್ತದೆ’ ಎಂದೂ ಹೇಳಿದರು.