ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ಭಾರತ ನೋಟಿಸ್‌

Last Updated 27 ಜನವರಿ 2023, 16:09 IST
ಅಕ್ಷರ ಗಾತ್ರ

ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ (ಐಡಬ್ಲ್ಯುಟಿ) ಒಪ್ಪಂದದ ಮಾರ್ಪಾಡಿಗೆ ಸೂಚಿಸಿ ಭಾರತವು ಪಾಕಿಸ್ತಾನಕ್ಕೆ ನೋಟಿಸ್‌ ನೀಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.

ಗಡಿಯಾಚೆಗಿನ ನದಿಗಳಿಗೆ ಸಂಬಂಧಿಸಿದ ವಿಷಯಗಳ ಒಪ್ಪಂದಕ್ಕೆ ಆರು ದಶಕಗಳ ಹಿಂದೆಯೇ ಸಹಿ ಹಾಕಲಾಗಿದೆ. ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್‌ ಯೋಜನೆಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ಸಲುವಾಗಿ, ಇದರ ಅನುಷ್ಠಾನದಲ್ಲಿ ಇಸ್ಲಾಮಾಬಾದ್‌ ಅನುಸರಿಸುತ್ತಿರುವ ‘ಹಠಮಾರಿತನ’ ಗಮನಿಸಿ, ಕೆಲ ಮಾರ್ಪಾಡಿಗಾಗಿ ಒಪ್ಪಂದದ ವಿಧಿ XII (3)ರ ನಿಬಂಧನೆಗಳ ಪ್ರಕಾರ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ.

ಗಡಿಯಾಚೆಗಿನ ಹಲವು ನದಿಗಳ ನೀರು ಹಂಚಿಕೆಯಲ್ಲಿ ಉಭಯ ರಾಷ್ಟ್ರಗಳು ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕರಿಸುವ ಕಾರ್ಯವಿಧಾನಕ್ಕೆ ವಿಶ್ವಬ್ಯಾಂಕ್‌ ಸಹಿ ಒಳಗೊಂಡ ಈ ಒಪ್ಪಂದಕ್ಕೆ ಒಂಬತ್ತು ವರ್ಷಗಳ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು.

‘ಐಡಬ್ಲ್ಯುಟಿಯ ಉಲ್ಲಂಘನೆ ಸರಿಪಡಿಸಲು ಪಾಕಿಸ್ತಾನಕ್ಕೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಲು 90 ದಿನಗಳ ಅವಕಾಶವನ್ನು ಒದಗಿಸುವುದು ನೋಟಿಸ್‌ನ ಉದ್ದೇಶವಾಗಿದೆ. ಕಳೆದ 62 ವರ್ಷಗಳಲ್ಲಿ ಕಲಿತ ಪಾಠಗಳನ್ನು ಅಳವಡಿಸಿಕೊಳ್ಳಲು ಈ ಒಪ್ಪಂದ ಪರಿಷ್ಕರಿಸಲಾಗುತ್ತಿದೆ. ಈ ಒಪ್ಪಂದ ಅನುಷ್ಠಾನದಲ್ಲಿ ಭಾರತ ಜವಾಬ್ದಾರಿಯುತ ಪಾಲುದಾರ ಮತ್ತು ಇದಕ್ಕೆ ಅಚಲ ಬೆಂಬಲವನ್ನು ನೀಡುತ್ತಿದೆ’ ಎಂದು ಮತ್ತೊಂದು ಮೂಲ ಹೇಳಿದೆ.

‘ಪಾಕಿಸ್ತಾನದ ಕ್ರಮಗಳು ಈ ಒಪ್ಪಂದದ ನಿಬಂಧನೆಗಳು ಮತ್ತು ಅವುಗಳ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಹಾಗಾಗಿ ಒಪ್ಪಂದ ಮಾರ್ಪಡಿಸಲು ಭಾರತವು ನೋಟಿಸ್‌ ನೀಡಿದೆ’ ಎಂದು ಮೂಲ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT