ನವದೆಹಲಿ: ಗಡಿಯಿಂದ ಸೇನಾ ಪಡೆಗಳ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದರೆ ಚೀನಾ ಸೇನೆಯು ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಭಾರತದ ಪ್ರದೇಶದಿಂದ ಸಂಪೂರ್ಣ ಹಿಂತೆರಳಲೇಬೇಕು ಎಂದು ಭಾರತ ಹೇಳಿದೆ.
ಉಭಯ ರಾಷ್ಟ್ರಗಳ ಹಿರಿಯ ರಾಜತಾಂತ್ರಿಕರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಮ್ಮತಿಸಿ ಒಂದು ವಾರವೇ ಕಳೆದಿದೆ. ಆದಾಗ್ಯೂ, ನೈಜ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಸದ್ಯ ಸ್ಥಗಿತಗೊಂಡಿದೆ.
ಉಭಯ ದೇಶಗಳ ಸೇನೆಗಳೂ ಪಡೆಗಳನ್ನು ಮುಂಚೂಣಿ ನೆಲೆಗಳಿಂದ ಹಿಂದಕ್ಕೆ ಕರೆಸಿಕೊಳ್ಳುವಲ್ಲಿ ಪ್ರಗತಿ ಸಾಧಿಸಿವೆ ಎಂದು ಗುರುವಾರ ಚೀನಾ ಹೇಳಿಕೊಂಡಿತ್ತು.
‘ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಉಭಯ ದೇಶಗಳೂ ಸೇನೆ ಮತ್ತು ರಾಜತಾಂತ್ರಿಕ ಮಟ್ಟದ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ. ಮುಂಚೂಣಿ ನೆಲೆಗಳಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಲ್ಲಿ ಪ್ರಗತಿ ಸಾಧಿಸಿವೆ’ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದರು.
ಆದರೆ, ನವದೆಹಲಿಯಲ್ಲಿನ ಉನ್ನತ ಮೂಲಗಳು ಇದನ್ನು ನಿರಾಕರಿಸಿವೆ. ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಜುಲೈ ಎರಡನೇ ವಾರದಿಂದ ಸ್ಥಗಿತಗೊಂಡಿದೆ. ಚೀನಾವು ಸಂಪೂರ್ಣವಾಗಿ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ಹೇಳಿವೆ.