ಮುಂಬೈ: ಬಾಲಿವುಡ್ ನಟ, ಸಮಾಜಸೇವಕ ಸೋನು ಸೂದ್ ಅವರ ವಿರುದ್ಧದ ಆದಾಯ ತೆರಿಗೆ ಇಲಾಖೆಯ ದಾಳಿ, ತಪಾಸಣೆ ಗುರುವಾರವು ಮುಂದುವರಿಯಿತು. ಈ ಮಧ್ಯೆ, ಅನೇಕ ರಾಜಕೀಯ ಪಕ್ಷಗಳು ನಟನ ನೆರವಿಗೆ ಬಂದಿದ್ದು, ಐ.ಟಿ ದಾಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿವೆ.
ಎಎಪಿ ಸ್ಥಾಪಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಐ.ಟಿ ದಾಳಿಯನ್ನು ಖಂಡಿಸಿದ್ದು, ದೇಶದ ಅಸಂಖ್ಯ ಕುಟುಂಬಗಳು ಸೋನುಸೂದ್ ಜೊತೆಗಿವೆ ಎಂದು ಹೇಳಿದ್ದಾರೆ.
ಇದು, ತಾಲಿಬಾನ್ ಮನಸ್ಥಿತಿ. ನಿರ್ದಿಷ್ಟವಾಗಿ ಗುರಿಯಾಗಿಸಿ ಈಗ ಐ.ಟಿ.ದಾಳಿನಡೆದಿದೆ ಎಂದು ಶಿವಸೇನಾ ಶಾಸಕ ಮನಿಶಾ ಕಾಯಂದೆ ಅವರು ಟೀಕಿಸಿದ್ದಾರೆ.
‘ಸೋನು ಸೂದ್ ಹಲವು ಕುಟುಂಬಗಳಿಗೆ ಆಪದ್ಬಾಂಧವ. ಸರ್ಕಾರಗಳು ಅಲಕ್ಷ್ಯ ಮಾಡಿದ್ದಾಗ ಅನೇಕ ಕುಟುಂಬಗಳಿಗೆ ಇರುವ ನೆರವಾಗಿದ್ದರು’ ಎಂದು ಎಎಪಿ ವಕ್ತಾರ ರಾಘವ್ ಚಾದಾ ಅವರು ಟ್ವೀಟ್ ಮಾಡಿದ್ದಾರೆ. ತೆರಿಗೆ ವಂಚಿಸಿರುವ ಆರೋಪದಡಿ ಮುಂಬೈನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.