ಜೈಪುರ: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಜೈಪುರ ಘಟಕವು 100 ಆಮ್ಲಜನಕ ಕಾನ್ಸಂಟ್ರೇಟರ್ಗಳನ್ನು ಸೋಮವಾರ ರಾಜಸ್ಥಾನ ಸರ್ಕಾರಕ್ಕೆ ನೀಡಿದೆ.
ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ಅವರಿಗೆ ಕಾನ್ಸಂಟ್ರೇಟರ್ಗಳನ್ನು ಹಸ್ತಾಂತರಿಸಲಾಗಿದೆ. 'ಆಮ್ಲಜನಕ ಕೊರತೆಯಿಂದ ಹೊರ ಬರಲು ರಾಜ್ಯ ಸರ್ಕಾರವು ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ' ಎಂದು ರಘು ಶರ್ಮಾ ಹೇಳಿದ್ದಾರೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್ಆರ್) ಭಾಗವಾಗಿ ಕಾನ್ಸಂಟ್ರೇಟರ್ಗಳನ್ನು ಪೂರೈಸಲಾಗಿದೆ. ಜರ್ಮನಿಯಲ್ಲಿ ತಯಾರಿಸಲಾಗಿರುವ ₹15 ಕೋಟಿ ಮೌಲ್ಯದ ನೂರು ಕಾನ್ಸಂಟ್ರೇಟರ್ಗಳನ್ನು ಸರ್ಕಾರಕ್ಕೆ ನೀಡಿರುವುದಾಗಿ ಡಬ್ಲ್ಯುಎಚ್ಒ ಪ್ರತಿನಿಧಿ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.
ಕಾನ್ಸಂಟ್ರೇಟರ್ ಪ್ರತಿ ನಿಮಿಷಕ್ಕೆ 8 ಲೀಟರ್ ಆಮ್ಲಜನಕ ಪೂರೈಸುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ನಿಮಿಷಕ್ಕೆ 10 ಲೀಟರ್ ಆಮ್ಲಜನಕ ಉತ್ಪಾದನೆಗೆ ಹೆಚ್ಚಿಸಿಕೊಳ್ಳುವ ಅವಕಾಶವೂ ಇರುವುದಾಗಿ ತಿಳಿಸಿದ್ದಾರೆ.