ಶ್ರೀನಗರ: ಉಗ್ರರು ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕವನ್ನು(ಐಇಡಿ) ಪತ್ತೆ ಹಚ್ಚಿದ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ ಭಾರಿ ಅನಾಹುತವನ್ನು ತಪ್ಪಿಸಿದೆ.
ಕುಲ್ಗಾಮ್ ಜಿಲ್ಲೆಯ ಕ್ವಾಜಿಗುಂಡ ಪ್ರದೇಶದ ದಾಮ್ಜೆನ್ ಎಂಬ ಗ್ರಾಮದ ಹೊರ ವಲಯದಲ್ಲಿ ಚಿನಾರ್ ಮರದ ಕೆಳಗೆ ಉಗ್ರರು ಸ್ಫೋಟಕವನ್ನು ಇಟ್ಟಿದ್ದರು. ತಕ್ಷಣ ಸ್ಫೋಟಕ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ.
'ಕ್ವಾಜಿಗುಂಡ ಪ್ರದೇಶದ ದಾಮ್ಜೆನ್ ಗ್ರಾಮದ ಹೊರಗೆ ಚಿನಾರ್ ಮರದ ಕೆಳಗೆ ಐಇಡಿ ಪತ್ತೆಯಾಗಿತ್ತು. ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಐಇಡಿಯನ್ನು ನಿಷ್ಕ್ರಿಯಗೊಳಿಸಿ, ನಾಶ ಮಾಡಲಾಗಿದೆ' ಎಂದು ಪೊಲೀಸ್ ವಕ್ತಾರ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಪುಲ್ವಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಬುಧವಾರ ಗುಂಡಿನ ಕಾಳಗ ಆರಂಭವಾಗಿದೆ. ಉಗ್ರರು ನುಸುಳಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆ ಪುಲ್ವಾಮ ನಗರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.