ಡೆಹ್ರಾಡೂನ್: ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನ ಮೇ 17ರಂದು ಭಕ್ತರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡ ಚಾರ್ಧಾಮ್ ದೇವಸ್ಥಾನಂ ವ್ಯವಸ್ಥಾಪಕ ಮಂಡಳಿ ಗುರುವಾರ ತಿಳಿಸಿದೆ.
ಚಳಿಗಾಲ ಆರಂಭಗೊಂಡ ನಂತರ ಶಿವನ ವಿಗ್ರಹವನ್ನು ಊಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಮೇ 14ರಂದು ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಾಲಯದಿಂದ ಹೊರ ತೆಗೆದು, ಮೇ 17ರಿಂದ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಂಡಳಿಯ ವಕ್ತಾರರೊಬ್ಬರು ಹೇಳಿದರು.
ಈ ದೇವಸ್ಥಾನವನ್ನು ಕಳೆದ ವರ್ಷ ನವೆಂಬರ್ 16ರಂದು ಮುಚ್ಚಲಾಗಿತ್ತು.
ಕಳೆದ ವರ್ಷ ನವೆಂಬರ್ 19ರಂದು ಮುಚ್ಚಲಾಗಿದ್ದ ಬದರಿನಾಥ ದೇವಸ್ಥಾನವನ್ನು ಮೇ 18ರಂದು ತೆರೆಯಲಾಗುವುದು. ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ಸಹ ಮೇ 14ರಂದು ಭಕ್ತರಿಗೆ ಮುಕ್ತಗೊಳಿಸಲಾಗುವುದು.
ಈ ನಾಲ್ಕು ದೇವಾಲಯಗಳನ್ನು ಭಕ್ತರಿಗೆ ಮುಕ್ತಗೊಳಿಸಿದ ನಂತರ ಚಾರ್ಧಾಮ್ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.