ತಿರುವನಂತಪುರ: ಯೋಗವನ್ನು ಆರೋಗ್ಯ ರಕ್ಷಣೆಯ ರೂಪವೆಂದು ಕರೆದಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಯೋಗ ಯಾವುದೇ ಧರ್ಮದ ಚೌಕಟ್ಟಿಗೆ ಸೀಮಿತವಾಗಿ ಇರಬಾರದು. ಇದರಿಂದಾಗಿ ಹಲವರು ಯೋಗದ ಪ್ರಯೋಜನಗಳಿಂದ ವಂಚಿತರಾಗಬಹುದು ಎಂದು ಹೇಳಿದ್ದಾರೆ.
‘ಆಧುನಿಕ ಯೋಗವನ್ನು ನಾವು ಯಾವುದೇ ಧರ್ಮ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಷಯದಂತೆ ನೋಡಬಾರದು. ಯೋಗವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಉತ್ತಮ. ಯೋಗವನ್ನುಜನರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಅವರು ವಿಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ.
ಯೋಗ ವಿಜ್ಞಾನವನ್ನು ‘ಜಾತ್ಯತೀತ ಸ್ವರೂಪ’ದಲ್ಲಿ ಪ್ರಚಾರ ಮಾಡುತ್ತಿರುವ ಕೇರಳ ಯೋಗ ಸಂಘದ (ಕೆವೈಎ) ಪ್ರಯತ್ನಕ್ಕೆ ಪಿಣರಾಯಿ ವಿಜಯನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.