ಕೊಚ್ಚಿ: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರು ರಾಜ್ಯದ ಮೂವರು ಸಿಪಿಐ–ಎಂ ನಾಯಕರ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ್ದಾರೆ. ಸ್ವಪ್ನಾ ಅವರ ಹೇಳಿಕೆಯು ಕೇರಳದಲ್ಲಿ ಹೊಸ ವಿವಾದ ಸೃಷ್ಟಿ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡು ಆರೋಪ, ಟೀಕೆಗಳನ್ನು ಮಾಡುತ್ತಿದ್ದ ಸ್ವಪ್ನಾ ಈಗ ಸಿಪಿಐ–ಎಂನ ನಾಯಕರ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ.
ಶುಕ್ರವಾರ ರಾತ್ರಿ ಸ್ಥಳೀಯ ಪ್ರಮುಖ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸ್ವಪ್ನಾ ಈ ಆರೋಪ ಮಾಡಿದ್ದಾರೆ.
‘ಮಾಜಿ ಸಚಿವ ಮತ್ತು ಹಾಲಿ ಶಾಸಕ ಕಡಕಂಪಲ್ಲಿ ಸುರೇಂದ್ರನ್ ಮತ್ತು ಮಾಜಿ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರು. ಈ ಮೂಲಕ ಲೈಂಗಿಕ ದುರ್ವರ್ತನೆ ತೋರಿದ್ದರು. ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಮುನ್ನಾರ್ ಪ್ರವಾಸಕ್ಕೆ ನನ್ನನ್ನು ಕರೆದಿದ್ದರು’ ಎಂದು ಸ್ವಪ್ನಾ ಹೇಳಿದ್ದಾರೆ.
ಸ್ವಪ್ನಾ ಆರೋಪ ಮಾಡಿ ದಿನ ಕಳೆದರೂ, ಸಿಪಿಐ–ಎಂ ಮಾತ್ರ ಈ ವರೆಗೆ ಮೌನವಾಗೇ ಉಳಿದಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2020ರ ಜುಲೈನಲ್ಲಿ ಬಯಲಿಗೆ ಬಂದಿದ್ದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ಯುಎಇಯಿಂದ ತಿರುವನಂಥಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಬ್ಯಾಗೇಜ್ಗಳ ಜೊತೆಗೆ ಗುಟ್ಟಾಗಿ 30 ಕೆ.ಜಿ. ಚಿನ್ನವನ್ನು ಸಾಗಿಸಲಾಗಿತ್ತು. ಕಳ್ಳ ಮಾರ್ಗದಲ್ಲಿ ಸಾಗಿಸಲಾಗುತ್ತಿದ್ದ ಚಿನ್ನವನ್ನು ವಿಮಾನ ನಿಲ್ದಾಣ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ಐಎಗೆ ವಹಿಸಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿತ್ತು.