ಲಖನೌ: ‘ಭಗವಾನ್ ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ. ನಾವೆಲ್ಲಾ ರಾಮ ಮತ್ತು ಕೃಷ್ಣನ ಭಕ್ತರು’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಜಮಗಢದಿಂದ ಲಖನೌಗೆ ವಾಪಸಾಗುತ್ತಿದ್ದ ವೇಳೆ ಅಯೋಧ್ಯೆಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಕುಟುಂಬ ಸಮೇತ ಅಯೋಧ್ಯೆ ರಾಮ ಜನ್ಮಭೂಮಿಗೆ ಭೇಟಿ ನೀಡಿ ರಾಮನಿಗೆ ಪೂಜೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆದರೆ, ಯಾವಾಗ ಭೇಟಿ ನೀಡುತ್ತಾರೆ ಎಂಬುದನ್ನು ತಿಳಿಸಿಲ್ಲ.
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಅಯೋಧ್ಯೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ನಾವು ಉತ್ತರಪ್ರದೇಶದ ಆಡಳಿತದಲ್ಲಿದ್ದಾಗ ಅಯೋಧ್ಯೆಯಲ್ಲಿ ಪಾರಿಜಾತ ಗಿಡಗಳ ಸಹಿತ ‘ಪರಿಕ್ರಮ ಮಾರ್ಗ’ ನಿರ್ಮಿಸಲಾಗಿತ್ತು. ಈ ವರ್ತುಲ ರಸ್ತೆಯಲ್ಲಿ ದೀಪಾವಳಿ ಹಬ್ಬದ ಬಳಿಕ ಭಕ್ತರು ಪ್ರದಕ್ಷಿಣೆ ಬರುತ್ತಾರೆ. ಧಾರ್ಮಿಕ ಪ್ರಾಮುಖ್ಯತೆಯುಳ್ಳ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸರಯೂ ನದಿ ದಂಡೆಯಲ್ಲಿ, ರಾಮ ದೇವರನ್ನು ಪೂಜಿಸುವ ಸ್ಥಳದಲ್ಲಿ ಧ್ವನಿವರ್ಧಕ ಹಾಗೂ ದೀಪಗಳ ವ್ಯವಸ್ಥೆ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ.
2022ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಕನಿಷ್ಠ 350ರಿಂದ 403 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಣ್ಣ ಪಕ್ಷಗಳೊಂದಿಗೆ ಮಾತ್ರವೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ನೀಡಿರುವ ‘ಡೆತ್ ವಾರಂಟ್’ ಎಂದು ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಸುವ ಮತ್ತು ಆದಾಯ ದ್ವಿಗುಣಗೊಳಿಸುವ ಬಗ್ಗೆ ಸರ್ಕಾರವು ರೈತರಿಗೆ ಶಾಸನಬದ್ಧ ಖಚಿತತೆ ಒದಗಿಸಬೇಕು ಎಂದು ಹೇಳಿದ್ದಾರೆ.