ನವದೆಹಲಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿದ್ದ ವಿರೋಧ ಪಕ್ಷಗಳ ಎಂಟು ಸದಸ್ಯರನ್ನು ಅಮಾನತು ಮಾಡಿರುವ ಆದೇಶ ಹಿಂಪಡೆಯುವವರೆಗೂ ರಾಜ್ಯಸಭೆಯ ಕಲಾಪದಿಂದ ವಿರೋಧ ಪಕ್ಷಗಳು ದೂರ ಉಳಿಯುವುದಾಗಿ ಘೋಷಿಸಿದ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳ ಮುಖಂಡರನ್ನು ಭೇಟಿಯಾದರು.
ಭಾನುವಾರ ಕೃಷಿ ಮಸೂದೆ ಮಂಡನೆ ಮತ್ತು ಅಂಗೀಕಾರದ ವೇಳೆ ಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ನ ಡೆರೆಕ್ ಒಬ್ರಿಯಾನ್, ಡೋಲಾ ಸೇನ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಕಾಂಗ್ರೆಸ್ನ ರಾಜೀವ್ ಸಾತವ್, ಸೈಯದ್ ನಾಸಿರ್ ಹುಸೇನ್ (ಕರ್ನಾಟಕ), ರಿಪುನ್ ಬೋರಾ, ಸಿಪಿಎಂನ ಕೆ.ಕೆ.ರಾಗೇಷ್ ಮತ್ತು ಎಳಮರಂ ಕರೀಂ ಅವರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿತ್ತು.
ಸಭೆಯಲ್ಲಿ ಸದಸ್ಯರು ತಮ್ಮ ಕುಂದುಕೊರತೆಗಳನ್ನು ಬಿರ್ಲಾ ಅವರ ಮುಂದೆ ಇಟ್ಟರು. ಆದರೆ ಯಾವುದೇ ಒಮ್ಮತಕ್ಕೆ ಬರಲಾಗಲಿಲ್ಲ ಮತ್ತು ಅವರು ಸದನದ ಕಲಾಪವನ್ನು ಬರಿಷ್ಕರಿಸುತ್ತಾರೆ ಎಂದು ಸಭೆಯಿಂದ ಹೊರಬರುವಾಗ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಇದನ್ನೂ ಓದಿ:ರಾಜ್ಯಸಭೆ ಗದ್ದಲ: ಎಂಟು ಸದಸ್ಯರ ಅಮಾನತು
ನಾವು ಬಹಿಷ್ಕಾರವನ್ನು ಮುಂದುವರಿಸುತ್ತೇವೆ. ಕೃಷಿ ಸಮುದಾಯದ ವಿರುದ್ಧವಿರುವ ಕೃಷಿ ಮಸೂದೆಗಳ ವಿರುದ್ಧವೂ ನಾವು ಪ್ರತಿಭಟಿಸುತ್ತೇವೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಕಲಾಪವನ್ನು ಬಹಿಷ್ಕರಿಸಲು ನಿರ್ಧರಿಸುವ ಮೊದಲು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಸರ್ಕಾರದ ಮನವೊಲಿಸಲು ಪ್ರಯತ್ನಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇನ್ನೂ ಸಹಿ ಮಾಡದ ಕಾರಣ ಸರ್ಕಾರವು ಮಸೂದೆಗಳನ್ನು ಹಿಂಪಡೆಯಬಹುದು ಎಂದು ಹೇಳಿದರು.
ಕಲಾಪ ಶುರುವಾದ ಕೂಡಲೇ ಪ್ರತಿಪಕ್ಷದ ಸದಸ್ಯರು ಕೃಷಿ ಮಸೂದೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿಯುತ್ತಿದ್ದಂತೆ ಅಂತರವನ್ನು ಕಾಪಾಡುವ ನಿಯಮಗಳನ್ನು ಉಲ್ಲಂಘಿಸದಂತೆ ತಡೆಯಲು ಬಿರ್ಲಾ ಸದನವನ್ನು ಒಂದು ಗಂಟೆ ಮುಂದೂಡಿದರು.
ಕಲಾಪ ಮತ್ತೆ ಪ್ರಾರಂಭವಾಗುತ್ತಲೇ ಸದಸ್ಯರು ಮತ್ತೆ ಕೃಷಿ ಮಸೂದೆಗಳ ವಿಷಯವನ್ನು ಎತ್ತಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.