ಭೋಪಾಲ್: ಮಧ್ಯಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ‘ರಾಮವನ ಗಮನಪಥ’ ಮತ್ತು ‘ರಾಮಾಯಣ ಸರ್ಕ್ಯೂಟ್’ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಮರಕಂಟಕ್ ಸರ್ಕ್ಯೂಟ್’, ‘ತೀರ್ಥಂಕರ ಸರ್ಕ್ಯೂಟ್’, ‘ಮಾ ನರ್ಮದಾ ಪರಿಕ್ರಮ’ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಮವನ ಗಮನಪಥ’ವು ವನವಾಸದ ಬಳಿಕ ರಾಮ ಸಾಗಿದ ಮಾರ್ಗವನ್ನು ಬಿಂಬಿಸಲಿದೆ. ಇದನ್ನು ಚಿತ್ರಕೂಟದಿಂದ ಅಮರಕಂಟಕದವರೆಗೂ ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ, ಚಂಬಲ್ ಪ್ರಗತಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.