ಠಾಣೆ, ಮಹಾರಾಷ್ಟ್ರ: ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ, ಗರ್ಭಿಣಿ ಮತ್ತು ಮಗು ಸಾವಿಗೀಡಾಗುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಗರ್ಭಿಣಿಯರಿಗೆ ಮನೆಯಲ್ಲೇ ಹೆರಿಗೆ ಮಾಡಿಸುವುದನ್ನು ಭಿವಂಡೀ ನಿಝಾಮ್ಪುರ ಮುನ್ಸಿಪಲ್ ಕಾರ್ಪೊರೇಷನ್(ಬಿಎನ್ಎಂಸಿ) ನಿಷೇಧಿಸಿದೆ.
ಗ್ರಾಮೀಣ ಪ್ರದೇಶ ಮತ್ತು ಕೊಳೆಗೇರಿಗಳಲ್ಲಿರುವ ಮನೆಗಳಲ್ಲಿ ಹೆರಿಗೆ ಆಗಿರುವ ಹಲವು ಪ್ರಕರಣಗಳಲ್ಲಿ ಗರ್ಭಿಣಿ ಮತ್ತು ಮಗು ಸಾವಿಗೀಡಾಗಿರುವ ಉದಾಹರಣೆಗಳಿವೆ ಎಂದು ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ. ಕೆ.ಆರ್ ಖಾರತ್ ತಿಳಿಸಿದ್ದಾರೆ.
ಭಿವಂಡೀ ನಗರದಲ್ಲಿ ಪ್ರತಿ ವರ್ಷ 12 ಸಾವಿರದಿಂದ 13 ಸಾವಿರದಷ್ಟು ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ 3 ಸಾವಿರದಿಂದ 4 ಸಾವಿರದಷ್ಟು ಹೆರಿಗೆ ಪ್ರಕರಣಗಳು ಮನೆಯಲ್ಲೇ ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಆಗುವ ಬಹುತೇಕ ಹೆರಿಗೆಗಳನ್ನು ನರ್ಸ್ಗಳು ಮಾಡಿಸುತ್ತಾರೆ. ಇಂಥ ಸಮಯದಲ್ಲಿ ಮನೆಯಲ್ಲಿ ಹೆರಿಗೆಯಾದ ಮಹಿಳೆ ಮತ್ತು ಮಗುವಿಗೆ ಆರೈಕೆ ಮಾಡಲು ಸೂಕ್ತ ಆರೋಗ್ಯ ಸೌಲಭ್ಯಗಳಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎನ್ಎಂಸಿ ಆಯುಕ್ತ ಡಾ. ಪಂಕನ್ ಆಶಿಯಾ ಅವರು ಬಿಎನ್ಎಂಸಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ‘ಆರೋಗ್ಯ ಸಖಿ‘ ಕಾರ್ಯಕ್ರಮವನ್ನು ಜಾರಿಗೆಗೊಳಿಸಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಹೆರಿಗೆಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ನಡೆಯಬೇಕು. ಸದ್ಯ ಭಿವಂಡೀ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸರ್ಕಾರಿ ಆರೋಗ್ಯ ಕೇಂದ್ರಗಳಿವೆ ಎಂದು ಖಾರತ್ ತಿಳಿಸಿದ್ದಾರೆ.
ಆರೋಗ್ಯ ಸಖಿ ಕಾರ್ಯಕ್ರಮವು ತರಬೇತಿ ಹೊಂದಿದ ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಮೂಲಕ ಬಡವರ್ಗದವರು ಇರುವ ಪ್ರದೇಶಗಳಿಗೆ ಹಾಗೂ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ. ಇಂಥ 20 'ಆರೋಗ್ಯ ಸಖಿಯರನ್ನು' ಬಿಎನ್ಎಂಸಿ ಹೊಂದಿದೆ ಎಂದು ಖಾರತ್ ಹೇಳಿದರು.