ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಜತೆಗಿರುವ ಶಿವಸೇನಾದ 39 ಶಾಸಕರು ಮತ್ತು ಬಿಜೆಪಿ ಮೈತ್ರಿ ಸರ್ಕಾರವು ಇದೇ 4ರಂದು (ಸೋಮವಾರ) ವಿಶ್ವಾಸಮತ ಕೋರಲಿದೆ. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆ ನಡೆಸಬೇಕಾದ ಅಗತ್ಯ ಬಿದ್ದರೆ ಭಾನುವಾರ ಚುನಾವಣೆ ನಡೆಯಲಿದೆ. ಎರಡು ದಿನಗಳ ವಿಶೇಷ ಅಧಿವೇಶನ ಭಾನುವಾರವೇ ಆರಂಭವಾಗಲಿದೆ.
ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಉದ್ಧವ್ ನೇತೃತ್ವದ ಶಿವಸೇನಾ, ಎನ್ಸಿಪಿ, ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ (ಎಂವಿಎ) ನಿರ್ಧರಿಸಿದೆ. ಆದರೆ, ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಶಿವಸೇನಾದ 39 ಶಾಸಕರ ಬೆಂಬಲವೂ ಇದೆ. 10 ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕೆಲವು ಸಣ್ಣ ಪಕ್ಷಗಳ ಬೆಂಬಲವೂ ಇದೆ. ಹಾಗಾಗಿ, 165 ಶಾಸಕರು ಬೆಂಬಲಕ್ಕೆ ಇದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಉದ್ಧವ್ ಠಾಕ್ರೆ ಜತೆಗೆ ಶಿವಸೇನಾದ 16, ಕಾಂಗ್ರೆಸ್ನ 44 ಮತ್ತು ಎನ್ಸಿಪಿಯ 51 ಶಾಸಕರು ಇದ್ದಾರೆ. ಹೀಗಾಗಿ ಸ್ಪೀಕರ್ ಚುನಾವಣೆಯಲ್ಲಿ ಎಂವಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕ್ಷೀಣ.
‘ಎಂವಿಎ ಸ್ಪೀಕರ್ ಹುದ್ದೆಯಲ್ಲಿ ಸ್ಪರ್ಧಿಸಲಿದೆ. ಶಿವಸೇನಾದಿಂದ ದೂರ ಹೋಗಿರುವ ಶಾಸಕರು ಅನರ್ಹತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಎಂವಿಎಗೆ ಮತ ಹಾಕಲಿದ್ದಾರೆ. ಅವರು ಮತ ಹಾಕದೇ ಇದ್ದರೆ ಅನರ್ಹತೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.