ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರದ ಪಡೆಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿರುವುದೇ ಕೂಚ್ ಬಿಹಾರ್ನಲ್ಲಿ ಜನರು ಸಿಐಎಸ್ಎಫ್ ಮೇಲೆ ದಾಳಿಗೆ ಮುಂದಾಗಲು ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿದ್ದಾರೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಶಾಂತಿಪುರದಲ್ಲಿ ರೋಡ್ಶೋ ನಡೆಸಿದ ಬಳಿಕ ವರದಿಗಾರರ ಜತೆ ಮಾತನಾಡಿದ ಅವರು, ಸಾವಿನ ವಿಚಾರದಲ್ಲೂ ಮುಖ್ಯಮಂತ್ರಿಗಳು ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
‘ಕೇಂದ್ರದ ಪಡೆಗಳನ್ನು ಬಹಿಷ್ಕರಿಸುವಂತೆ ಮಮತಾ ಜನರಿಗೆ ಸಲಹೆ ನೀಡಿದ್ದರು. ಇದು ಸೀತಾಲಕುಚಿಯಲ್ಲಿ ಸಂಭವಿಸಿದ ಸಾವಿಗೆ ಕಾರಣವಲ್ಲವೇ? ಅವರ ಸಲಹೆಯು ಜನರು ಸಿಐಎಸ್ಎಫ್ ಮೇಲೆ ದಾಳಿ ನಡೆಸುವಂತೆ ಪ್ರಚೋದನೆ ನೀಡಿತು’ ಎಂದು ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನವು ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಕೂಚ್ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಜನರು ಸಿಐಎಸ್ಎಫ್ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿಯ ಬಂದೂಕು ಕಸಿದುಕೊಳ್ಳಲು ಯತ್ನಿಸಿದಾಗ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು.
ನಾಲ್ಕನೇ ಹಂತದ ಮತದಾನದ ವೇಳೆ ಸೀತಾಲಕುಚಿಯಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರೂ ಮೃತಪಟ್ಟಿದ್ದರು.
ಸಿಐಎಸ್ಎಫ್ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಿರುವ ಮಮತಾ, ಬಿಜೆಪಿ ಕಾರ್ಯಕರ್ತನ ಸಾವಿಗೆ ಸಂತಾಪ ಸೂಚಿಸಿಲ್ಲ. ಸಾವಿನ ವಿಚಾರದಲ್ಲಿಯೂ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾ ದೂರಿದ್ದಾರೆ.
ಮೊದಲ ಮೂರು ಹಂತಗಳ ಚುನಾವಣೆ ಶಾಂತಿಯುತವಾಗಿತ್ತು. ಮುಂದಿನ ನಾಲ್ಕು ಹಂತಗಳ ಮತದಾನದಲ್ಲಿಯೂ ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.