ಮುಂಬೈ:ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ತುಂಬಿದ್ದ ಎಸ್ಯುವಿ ಮಾಲೀಕ, ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ತಮ್ಮ ಎಸ್ಯುವಿ ಕಳವಾಗಿತ್ತು ಎಂದು ಅವರು ಹೇಳಿಕೊಂಡಿದ್ದರು.
ಥಾಣೆ ಜಿಲ್ಲೆಯ ಮುಂಬ್ರಾದಲ್ಲಿ ಹಿರೇನ್ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಬಳಿ ಫೆಬ್ರುವರಿ 24ರ ಮಧ್ಯರಾತ್ರಿ ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಎಸ್ಯುವಿಯನ್ನು ನಿಲ್ಲಿಸಲಾಗಿತ್ತು. ಸುಮಾರು 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರ ಅದರಲ್ಲಿ ಪತ್ತೆಯಾಗಿತ್ತು.
ಈ ಮಧ್ಯೆ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ ಉಲ್ಲೇಖಿಸಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಹಿರೇನ್ ಅವರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಸಚಿನ್ ವಾಜ್ ಅವರ ಪರಿಚಯ ಇರುವಂತಿದೆ ಎಂದೂ ಫಡಣವೀಸ್ ಹೇಳಿದ್ದಾರೆ.
‘ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು,ಅಪರಾಧ ವಿಭಾಗದಪೊಲೀಸರು ಸ್ಥಳಕ್ಕೆ ತಲುಪಿರಲಿಲ್ಲ. ಆದರೆ ಸಚಿನ್ ವಾಜ್ ಅಲ್ಲಿಗೆ ತಲುಪಿ ಕಾರು ಮತ್ತು ಅದರಲ್ಲಿದ್ದ ಪತ್ರವನ್ನು ವಶಪಡಿಸಿಕೊಂಡಿದ್ದರು’ ಎಂದೂ ಫಡಣವೀಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು ತನಿಖೆ ನಡೆಸುತ್ತಾರೆ ಎಂದು ಪೊಲೀಸರು ಹೇಳಿದ ಮೇಲೆ, ತನಿಖೆಯ ಹೊಣೆಯನ್ನು ವಾಜ್ ಅವರಿಗೆ ವಹಿಸಿದ್ದೇಕೆ ಎಂದೂ ಅವರು ಪ್ರಶ್ನಿಸಿದ್ದಾರೆ.