ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಹಲವು ಕ್ರಮ

ದೆಹಲಿ, ರಾಜಸ್ಥಾನದಲ್ಲಿ ಲಾಕ್‌ಡೌನ್‌: ಕೇರಳ, ಪಂಜಾಬ್‌ನಲ್ಲಿ ಕಠಿಣ ನಿರ್ಬಂಧ ವಿಧಿಸಲು ನಿರ್ಧಾರ
Last Updated 19 ಏಪ್ರಿಲ್ 2021, 18:27 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ನ ಎರಡನೇ ಅಲೆಯ ಪ್ರತಾಪ ಹೆಚ್ಚಾಗುತ್ತಿದ್ದು, ಸರ್ಕಾರಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ.

ಈಗಾಗಲೇ, ರಾತ್ರಿ ಕರ್ಫ್ಯೂ ಮುಂತಾದ ಕ್ರಮಗಳನ್ನು ಕೈಗೊಂಡಿರುವ ರಾಜ್ಯಗಳು, ಅದರ ಅವಧಿಯನ್ನು ವಿಸ್ತರಿಸುವುದು ಮತ್ತು ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಮಾಡಲು ಮುಂದಾಗಿವೆ. ದೆಹಲಿಯಲ್ಲಿ ಮಂಗಳ ವಾರ ರಾತ್ರಿಯಿಂದ ಜಾರಿಯಾಗುವಂತೆ ಆರು ದಿನಗಳ ಅವಧಿಗೆ ಲಾಕ್‌ಡೌನ್‌ ಘೋಷಿಸಲಾಗಿದೆ.

l ಮಂಗಳವಾರ ರಾತ್ರಿಯಿಂದ ಜಾರಿ ಯಾಗುವಂತೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲು ಕೇರಳ ಸರ್ಕಾರ ತೀರ್ಮಾನಿಸಿದೆ. ಮುಖ್ಯಕಾರ್ಯದರ್ಶಿ ಡಾ. ವಿ.ಪಿ. ಜ್ಯೋತಿ ಅಧ್ಯಕ್ಷತೆ ಯಲ್ಲಿ ನಡೆದ ಉನ್ನತಮಟ್ಟದ ಅಧಿಕಾರಿ ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳ
ಲಾಗಿದೆ. ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆ ಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

l ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದರೂ, ರಾಜ್ಯದಲ್ಲಿ ನಿಗದಿತ ದಿನಾಂಕಗಳಂದೇ ಎಸ್‌ಎಸ್‌ಎಲ್‌ಸಿ ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ಕೇರಳ ಸರ್ಕಾರ ತೀರ್ಮಾನಿಸಿದೆ. ‘ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಶಿಕ್ಷಣ ಇಲಾಖೆ ಹೇಳಿದೆ.

l ‘ಪ್ರಸಕ್ತ ಜಾರಿ ಮಾಡಲಾಗಿರುವ ನಿರ್ಬಂಧಗಳು ಕೋವಿಡ್‌ ತಡೆಯುವ ದಿಸೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಉಂಟುಮಾಡಿಲ್ಲ. ಆದ್ದರಿಂದ, ರಾಜ್ಯದಲ್ಲಿ ಕಠಿಣ ಲಾಕ್‌ಡೌನ್‌ ಜಾರಿಮಾಡುವ ವಿಚಾರ
ದಲ್ಲಿ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಮಹಾರಾಷ್ಟ್ರದ ಸಚಿವ ವಿಜಯ್‌ ವಡೆಟ್ಟಿವರ್‌ ತಿಳಿಸಿದ್ದಾರೆ.

l ರಾತ್ರಿ ಕರ್ಫ್ಯೂ ಅವಧಿಯನ್ನು ಹೆಚ್ಚಿಸುವುದೂ ಸೇರಿದಂತೆ ಮಂಗಳವಾರದಿಂದ ರಾಜ್ಯದಲ್ಲಿ ಇನ್ನಷ್ಟು ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಪಂಜಾಬ್‌ ಸರ್ಕಾರ ಹೇಳಿದೆ. ಚಿತ್ರಮಂದಿರ, ಜಿಮ್‌, ಸ್ಪಾ, ಕೋಚಿಂಗ್‌ ಕೇಂದ್ರ, ಕ್ರೀಡಾ ಸಂಕೀರ್ಣಗಳು ಏಪ್ರಿಲ್‌ ಅಂತ್ಯದವರೆಗೂ ಮುಚ್ಚಿರುತ್ತವೆ. ರಾತ್ರಿ ಕರ್ಫ್ಯೂ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದ್ದು, ಅದು ರಾತ್ರಿ 8ರಿಂದ ಬೆಳಿಗ್ಗೆ 5ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಹೇಳಿದ್ದಾರೆ

l ಮಣಿಪುರ ಸರ್ಕಾರವು 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಿದೆ. ಮೇ 5ರಿಂದ ಈ ಪರೀಕ್ಷೆಗಳು ನಡೆಯಲಿದ್ದವು. ಎಲ್ಲಾ ತರಗತಿಗಳು, ಕೋಚಿಂಗ್‌ ಕ್ಲಾಸ್‌ಗಳನ್ನು ರದ್ದುಪಡಿಸಲಾಗಿದೆ. ಹಾಸ್ಟೆಲ್‌ಗಳು, ಪೇಯಿಂಗ್ ‌ಗೆಸ್ಟ್‌ ಕೇಂದ್ರಗಳನ್ನು ತಕ್ಷಣದಿಂದಲೇ ಮುಚ್ಚಲು ಸೂಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಆನ್‌ಲೈನ್‌ ತರಗತಿಗಳನ್ನು ಪುನಃ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

l ಕೋವಿಡ್‌ನ ಎರಡೂ ಅಲೆಗಳ ಸಂದರ್ಭದಲ್ಲಿ ಸೋಂಕಿಗೆ ಒಳಗಾದವರಲ್ಲಿ ಶೇ 70ಕ್ಕೂ ಹೆಚ್ಚು ಜನರು 40 ವರ್ಷ ವಯಸ್ಸಿಗೆ ಮೇಲ್ಪಟ್ಟವರು ಎಂದು ವೈದ್ಯರು ಹೇಳಿದ್ದಾರೆ. ‘ಎರಡನೇ ಅಲೆಯಲ್ಲಿ ರೋಗಲಕ್ಷಣಗಳು ಕಾಣಿಸದಿರುವ ಸೋಂಕಿತರ ಪ್ರಮಾಣವು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮೊದಲ ಮತ್ತು ಎರಡನೇ ಅಲೆಗಳ ನಡುವಿನ ಸಾವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಎರಡನೇ ಅಲೆಯಲ್ಲಿ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿದೆ ಮತ್ತು ವೆಂಟಿಲೇಟರ್ ಅವಶ್ಯಕತೆ ಹೆಚ್ಚಿಲ್ಲ. ಮೊದಲ ಅಲೆಯಲ್ಲಿ ಶೇ 41.5ರಷ್ಟು ಆಮ್ಲಜನಕದ ಅವಶ್ಯಕತೆ ಇದ್ದರೆ ಎರಡನೇ ಅಲೆಯಲ್ಲಿ ಶೇ 54.5ರಷ್ಟು ಮಂದಿಗೆ ಆಮ್ಲಜನಕದ ಅವಶ್ಯಕತೆ ಉಂಟಾಗಿದೆ’ ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.

l ಜೈಲಿನಲ್ಲಿ ಕೈದಿಗಳ ಸಂಖ್ಯೆ ಮಿತಿ ಗಿಂತ ಹೆಚ್ಚಿರುವುದರಿಂದ, ಕೋವಿಡ್‌ ವೇಗವಾಗಿ ಹರಡುವ ಸಾಧ್ಯತೆ ಇದ್ದು, ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಅಥವಾ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ನಿರ್ದೇಶನ ನೀಡ ಬೇಕು ಎಂದು ದೆಹಲಿ ಹೈಕೋರ್ಟ್‌
ಗೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ತಿಹಾರ್‌ ಜೈಲಿನ 59 ಕೈದಿಗಳು ಮತ್ತು 7 ಸಿಬ್ಬಂದಿಗೆ ಕಳೆದವಾರ ಕೋವಿಡ್‌ ದೃಢ ಪಟ್ಟಿತ್ತು. ಈಗ ಸೋಂಕಿತ ಕೈದಿಗಳ ಸಂಖ್ಯೆಯು 117 ಹಾಗೂ ಸಿಬ್ಬಂದಿಯ ಸಂಖ್ಯೆ 14ಕ್ಕೆ ಹೆಚ್ಚಿದೆ ಎಂದು ಅರ್ಜಿದಾರ ವಕೀಲ ಆರ್‌.ಕೆ. ಗೊಸಾಯಿನ್‌ ಉಲ್ಲೇಖಿಸಿದ್ದಾರೆ.

l ಕೋವಿಡ್‌ ವಿರುದ್ಧ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ವಿಚಾರವಾಗಿ ಚರ್ಚಿಸಲು ಸಂಸತ್ತಿನ ಎರಡು ದಿನಗಳ ತುರ್ತು ಅಧಿವೇಶನವನ್ನು ಕರೆಯುವಂತೆ ಕಾಂಗ್ರೆಸ್‌ ಮುಖಂಡ ಮನೀಶ್‌‌ ತಿವಾರಿ ಅವರು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ. ‘ದೇಶದಲ್ಲಿ ಭಾರಿ ದುರಂತವೊಂದು ತೆರೆದುಕೊಳ್ಳುತ್ತಿದೆ. ಔಷಧ, ಬೆಡ್‌, ಆಮ್ಲಜನಕದ ಕೊರತೆ ತೀವ್ರವಾಗಿದೆ. ಬಿಜೆಪಿ ಮುಖಂಡರು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮುಳುಗಿದ್ದಾರೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ವಿಶೇಷ ಅಧಿವೇಶನ ಕರೆಯಬೇಕು’ ಎಂದು ಹೇಳಿದ್ದಾರೆ.

l ರೆಮ್‌ಡಿಸಿವಿರ್‌ ಹಾಗೂ ಇತರ ಔಷಧ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರನ್ನು ಪತ್ತೆಮಾಡಿ, ಅಂಥ ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಕ್ರಮ ಕೈಗೊಳ್ಳು ವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT