ನವದೆಹಲಿ: ಉಕ್ರೇನ್ನಲ್ಲಿ ಗಂಭೀರ ಸ್ಥಿತಿ ಇರುವ ನಗರಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಚರ್ಚಿಸಿದರು.
ಉಕ್ರೇನ್ನಲ್ಲಿನ ಸದ್ಯದ ಸ್ಥಿತಿ ಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ಹಾರ್ಕಿವ್ ನಗರದ ಪರಿಸ್ಥಿತಿ ಕುರಿತು ಉಭಯ ಮುಖಂಡರು ಚರ್ಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ತುರ್ತಾಗಿ ಹಾರ್ಕಿವ್ ತೊರೆಯಿರಿ: ಪರಿಸ್ಥಿತಿ ಹದಗೆಡುತ್ತಿರುವ ಉಕ್ರೇನ್ನ ಹಾರ್ಕಿವ್ ನಗರವನ್ನು ತಕ್ಷಣವೇ ‘ಬರಿಗಾಲಲ್ಲಿ ನಡೆದುಕೊಂಡಾದರೂ’ ತುರ್ತಾಗಿ ತೊರೆಯಬೇಕು ಎಂದು ಭಾರತ ಬುಧವಾರ ಉಕ್ರೇನ್ನಲ್ಲಿರುವ ತನ್ನ ನಾಗರಿಕರಿಗೆ ಸೂಚಿಸಿದೆ.
ಹಾರ್ಕಿವ್ ನಗರಕ್ಕೆ ಸಮೀಪದಲ್ಲಿರುವ ಪೆಸೊಚಿನ್ (11 ಕಿ.ಮೀ), ಬಬಾಯಿ (12 ಕಿ.ಮೀ.) ಬೆಜ್ಲ್ಯುಡಿವ್ಕಾ (16 ಕಿ.ಮೀ.)ಗೆ ತೆರಳಬೇಕು. ಇಲ್ಲಿಗೆ ಸುರಕ್ಷಿತವಾಗಿ ತಲುಪಲು ‘ಮಾನವೀಯತೆಯ ಮಾರ್ಗ’ ಒದಗಿಸುವ ಭರವಸೆಯನ್ನು ರಷ್ಯಾ ನೀಡಿದೆ ಎಂದು ಭಾರತ ಹೇಳಿದೆ.