ಮುಂಬೈ:ಪತ್ರಾ ಚಾಳ್ ಭೂಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ ರಾವುತ್ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದೇ ವೇಳೆ, ರಾವುತ್ ಅವರಿಗೆ ಮನೆ ಊಟ ಮತ್ತು ಔಷಧಿಗಳನ್ನು ನೀಡಲು ಕೋರ್ಟ್ ಅನುಮತಿ ನೀಡಿದೆ. ಆದರೆ ಮನೆಯಿಂದ ಹಾಸಿಗೆ ತರುವುದಕ್ಕೆ ನ್ಯಾಯಾಲಯ ಅನುಮತಿ ನೀಡಿಲ್ಲ.
ಹಗರಣಕ್ಕೆ ಸಂಬಂಧಿಸಿದಂತೆ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಇದೇ 1ರಂದು ತನ್ನ ವಶಕ್ಕೆ ಪಡೆದಿತ್ತು. ಕಸ್ಟಡಿ ಅವಧಿ ಸೋಮವಾರ ಕೊನೆಗೊಂಡಿದ್ದು, ಇನ್ನಷ್ಟು ದಿನ ಕಸ್ಟಡಿಯ ಅಗತ್ಯ ಇಲ್ಲ ಎಂದು ಇ.ಡಿ ತಿಳಿಸಿದ ಮೇರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.