ನವದೆಹಲಿ: ಲೋಕಸಭೆಯಲ್ಲಿ ಬುಧವಾರ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್, ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ ಉಂಟಾದ ಪರಿಣಾಮ ಸದನದ ಕಲಾಪವನ್ನು ಎರಡನೇ ಬಾರಿಗೆ ಮಧ್ಯಾಹ್ನ 2 ಗಂಟೆವರೆಗೆ ಮಂದೂಡಲಾಗಿದೆ.
ಬೆಳಿಗ್ಗೆ ಲೋಕಸಭೆ ಸಭೆ ಸೇರುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್, ಕೃಷಿ ಕಾಯ್ದೆ ಸೇರಿದಂತೆ ಹಲವು ವಿಷಯಗಳನ್ನು ಕೈಗೆತ್ತಿಕೊಂಡು, ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿರು. ಈ ಗದ್ದಲದ ನಡುವೆಯೇ ಸದನದಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಕಾಂಗ್ರೆಸ್ ಸದಸ್ಯರು ದಾಖಲೆ ಪತ್ರಗಳನ್ನು ಸಭಾಧ್ಯಕ್ಷ ಪೀಠದ ಮುಂದೆ ತೂರಿದರು. ನಂತರ ಸದನ ಕಲಾಪವನ್ನು ಸುಮಾರು 20 ನಿಮಿಷಗಳ ಕಾಲ, ಅಂದರೆ ಮಧ್ಯಾಹ್ನ 12.30 ರವರೆಗೆ ಮುಂದೂಡಲಾಯಿತು.
ಮಧ್ಯಾಹ್ನ 12.30ಕ್ಕೆ ಕಲಾಪ ಪುನರಾರಂಭವಾದಾಗ, ಸಭಾಧ್ಯಕ್ಷ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್ವಾಲ್ ಅವರು ನಿಯಮ 377ರ ಅಡಿಯಲ್ಲಿ ವಿಷಯಗಳನ್ನು ಕೈಗೆತ್ತಿಕೊಂಡರು. ನಂತರ, ಪ್ರತಿಭಟನಾ ನಿರತ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳುವಂತೆ ತಿಳಿಸಿದರು. ಆದರೂ ವಿರೋಧ ಪಕ್ಷಗಳ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿ, ಗದ್ದಲ ಎಬ್ಬಿಸಿದ ಕಾರಣ, ಕಲಾಪವನ್ನು ಮಧ್ಯಾಹ್ನ 2 ರವರೆಗೆ ಮುಂದೂಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.