ಪಟ್ನಾ: ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನ ಸೋಮವಾರ ಪ್ರಾರಂಭಗೊಂಡಿದ್ದು, ಮೊದಲ ದಿನವೇ ಆರ್ಜೆಡಿಯ ಶಾಸಕರು ಕಪ್ಪು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸುವ ಮೂಲಕ ಸುಮಾರು ನಾಲ್ಕು ತಿಂಗಳ ಹಿಂದೆ ಸದನದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದರು.
ಮಾರ್ಚ್ 23ರಂದು ವಿವಾದಾತ್ಮಕ ಮಸೂದೆಯೊಂದು ಸದನದಲ್ಲಿ ಅಂಗೀಕಾರ ಆಗದಂತೆ ತಡೆಯಲು ಸ್ಪೀಕರ್ ಅವರನ್ನು ಒತ್ತೆಯಾಳಾಗಿ ಇರಿಸಲುಆರ್ಜೆಡಿ ಶಾಸಕರು ಪ್ರಯತ್ನಿಸಿದರು ಎಂಬ ಕಾರಣಕ್ಕೆ ಸದನದೊಳಗೆ ಬಂದ ಪೊಲೀಸರು, ಆರ್ಜೆಡಿ ಪಕ್ಷದ ಶಾಸಕರಿಗೆ ಥಳಿಸಿದ್ದನ್ನು ಖಂಡಿಸಲಾಯಿತು.
ಈ ಘಟನೆಯನ್ನು ನೆನಪಿಸಿಕೊಂಡ ಆರ್ಜೆಡಿ ಶಾಸಕರು, ‘ಈ ಸರ್ಕಾರ ಅದೇ ರೀತಿ ನಮ್ಮ ಮೇಲೆ ದಾಳಿ ನಡೆಸಬಹುದೆಂದು ನಾವೆಲ್ಲ ಭಯಭೀತರಾಗಿದ್ದೇವೆ’ ಎಂದರು.
‘ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚನೆಯಿಂದ ಈ ವಿಷಯ ಅಂತ್ಯವಾಗುವುದಿಲ್ಲ. ಈ ಸಂಬಂಧ ತೇಜಸ್ವಿ ಯಾದವ್ ಅವರು ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಲಿದ್ದಾರೆ’ ಎಂದು ಆರ್ಜೆಡಿ ಪಕ್ಷದ ವಕ್ತಾರ ಭಾಯಿ ವಿರೇಂದ್ರ ಅವರು ವರದಿಗಾರರಿಗೆ ತಿಳಿಸಿದರು.