ನವದೆಹಲಿ (ಪಿಟಿಐ): ಸಂಸದರ ವಾಸ್ತವ್ಯಕ್ಕಾಗಿ ರಾಜಧಾನಿಯಲ್ಲಿ ನಿರ್ಮಿಸಿರುವ 76 ವಸತಿಗಳ ಬಹುಮಹಡಿ ಸಮುಚ್ಚಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸ್ಥಳದಲ್ಲಿದ್ದ 80 ವರ್ಷ ಹಳೆಯದಾದ ಬಂಗಲೆ ನೆಲಸಮಗೊಳಿಸಿ ಸಮುಚ್ಚಯ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು 2014ರಲ್ಲಿ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಕಾಯ್ದೆಗಳನ್ನು ರೂಪಿಸಲಾಗಿದೆ. ಅನೇಕ ಕಾಮಗಾರಿಗಳು ಮುಗಿದಿವೆ. ದೇಶದ ಅಭಿವೃದ್ಧಿಯಲ್ಲಿ ಈ ಅವಧಿಯು ಐತಿಹಾಸಿಕವಾದುದು’ ಎಂದು ಬಣ್ಣಿಸಿದರು.
ಯುವಜನರಿಗೆ 16 ರಿಂದ 18ರ ವಯೋಮಾನ ಮುಖ್ಯವಾದುದು ಎಂದು ಉಲ್ಲೇಖಿಸಿದ ಅವರು, ಅಂತೆಯೇ ಭಾರತದಂಥ ಯುವ ದೇಶದ ಅಭಿವೃದ್ಧಿಯಲ್ಲಿ 16 ಮತ್ತು 18ನೇ ಲೋಕಸಭೆಯೂ ಮುಖ್ಯವಾದುದಾಗಲಿದೆ ಎಂದು ಹೇಳಿದರು.
ನಾವು ಸಾಧಿಸಬೇಕಾದುದು ಇನ್ನೂ ಸಾಕಷ್ಟಿದೆ. ಅದು, ಆತ್ಮನಿರ್ಭರ ಭಾರತ್ ಅಭಿಯಾನ ಇರಬಹುದು, ಆರ್ಥಿಕತೆಯ ಗುರಿ ಇರಬಹುದು. ಪ್ರತಿಜ್ಞೆ ಮಾಡಿರುವ ಇಂಥ ಅನೇಕ ಸಾಧನೆಗಳನ್ನು ಈ ಅವಧಿಯಲ್ಲಿ ಮಾಡಬೇಕಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರ, ಕೇಂದ್ರ ಮಾಹಿತಿ ಆಯೋಗ ಮತ್ತು ಯುದ್ಧ ಸ್ಮಾರಕ ನಿರ್ಮಾಣ ಪೂರ್ಣವಾದುದು ಸೇರಿ ಇನ್ನೂ ಅನೇಕ ಅಂಶಗಳನ್ನು ಅವರು ಉಲ್ಲೇಖಿಸಿದರು.