ಹರಿದ್ವಾರ: ‘ಸರ್ಕಾರವು ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಕೇಸರಿಯಲ್ಲಿ ಏನು ತಪ್ಪಿದೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಪ್ರಶ್ನಿಸಿದ್ದು, ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ದೇಶದಿಂದ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಇಲ್ಲಿನ ದೇವ ಸಂಸ್ಕೃತಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘ವಸಾಹತು ಶಾಹಿ ಮನೋಭಾವದಿಂದ ಭಾರತೀಯರು ಹೊರಬರಬೇಕು. ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು’ ಎಂದರು.
‘ಭಾರತದ ಹೊಸ ಶಿಕ್ಷಣ ನೀತಿಯಿಂದ ಮಾತೃಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಮೆಕಾಲೆ ಶಿಕ್ಷಣ ಪದ್ಧತಿಯನ್ನು ತಿರಸ್ಕರಿಸಬೇಕು. ಅದು ವಿದೇಶಿ ಭಾಷೆಯನ್ನುದೇಶದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಹೇರಿದೆ. ಅಲ್ಲದೇ, ಶಿಕ್ಷಣವನ್ನು ಗಣ್ಯರಿಗೆ ಮಾತ್ರ ಸೀಮಿತಗೊಳಿಸಿದೆ’ ಎಂದು ನಾಯ್ಡು ಅವರು ಹೇಳಿದರು.