ಭುವನೇಶ್ವರ: ಆಡಳಿತಾರೂಢ ಬಿಜು ಜನತಾದಳ ಪಕ್ಷದ(ಬಿಜೆಡಿ) ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ‘ಜನ ವಿರೋಧಿ’ ಚಟುವಟಿಕೆಗಳ ಆರೋಪದಡಿ ಗೋಪಾಲ್ಪುರ ಶಾಸಕ ಪ್ರದೀಪ್ ಪಾಣಿಗ್ರಾಹಿ ಅವರನ್ನುಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದಾರೆ. ಬಿಜೆಡಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ಪಾಣಿಗ್ರಾಹಿ ಅವರು ಜನ ವಿರೋಧಿ ಚಟುವಟಿಕೆ ಆರೋಪದಿಂದಾಗಿ ಬಿಜೆಡಿ ಪಕ್ಷದಿಂದ ಉಚ್ಚಾಟನೆಯಾದ ಮೊದಲ ನಾಯಕರಾಗಿದ್ದಾರೆ. ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆಗಳಡಿ ಹಲವು ನಾಯಕರನ್ನು ಬಿಜೆಡಿಯಿಂದ ಹೊರ ಹಾಕಲಾಗಿತ್ತು.
ಬಿಜೆಡಿಯ ಮಾಧ್ಯಮ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮಾನಸ್ ರಂಜನ್ ಮಂಗರಾಜ್ ಅವರು ಸಹಿ ಮಾಡಿದ ಅಧಿಕೃತ ಆದೇಶದಲ್ಲಿ ಪ್ರದೀಪ್ ಅವರನ್ನು ಜನ ವಿರೋಧಿ ಚಟುವಟಿಕೆಗಳ ಕಾರಣದಿಂದ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಚಟುವಟಿಕೆಯ ಸ್ವರೂಪದ ಬಗ್ಗೆ ಸ್ಪಷ್ಟತೆಯನ್ನು ನೀಡಿಲ್ಲ.
ಅಮಾನತುಗೊಂಡಿರುವ ಭಾರತೀಯ ಅರಣ್ಯ ಸೇವೆಯ ಅಧಿಕಾರಿ (ಐಎಫ್ಎಸ್) ಅಭಯ್ ಕಾಂತ್ ಪಾಠಕ್ ಮತ್ತು ಅವರ ಪುತ್ರ ಆಕಾಶ್ ಕುಮಾರ್ ಪಾಠಕ್ ಅವರೊಂದಿಗೆ ಪ್ರದೀಪ್ ಅವರು ನಿಕಟ ಸಂಬಂಧ ಹೊಂದಿದ್ದಾರೆ ಎಂದು ಭ್ರಷ್ಟಾಚಾರ ತಡೆ ಜಾಗೃತದಳ ಆರೋಪಿಸಿತ್ತು. ಇದರ ಬೆನ್ನಲ್ಲೇ ಪ್ರದೀಪ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿ ಅಭಯ್ ಕಾಂತ್ ಪಾಠಕ್ ಮತ್ತು ಅವರ ಪುತ್ರ ಆಕಾಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅಲ್ಲದೆ ಆಕಾಶ್ ಕುಮಾರ್ ನಡೆಸಿದ ಉದ್ಯೋಗ ವಂಚನೆಗೆ ಪ್ರದೀಪ್ ಪಾಣಿಗ್ರಾಹಿ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಂಜಾಂ ಜಿಲ್ಲೆಯ ಯುವಕರಿಗೆ ಹೆಸರಾಂತ ಕಂಪನಿಯಲ್ಲಿ ಉದ್ಯೋಗದ ಆಮಿಷವೊಡ್ಡುವ ಮೂಲಕ ಮೋಸ ಮಾಡಿರುವ ಆರೋಪವನ್ನು ಆಕಾಶ್ ಪಾಠಕ್ ಎದುರಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.