ಮುಂಬೈ: ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಅಕ್ರಮವಾಗಿ ತನ್ನ ಫೋನ್ ಕದ್ದಾಲಿಸಿದ್ದಾರೆ ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಅಲ್ಲದೆ ಅವರು ವಾಂಖೆಡೆ ಅವರ ಮೇಲಿನ ಕೆಲ ಆರೋಪಗಳ ಕುರಿತ ಪತ್ರವನ್ನು ಎನ್ಸಿಬಿ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾರೆ.
ತನ್ನ ಅಳಿಯನ ಬಂಧನದ ಬಳಿಕ ವಾಂಖೆಡೆ ಅವರನ್ನು ಗುರಿಯಾಗಿಸಿಕೊಂಡಿರುವ ಮಲಿಕ್, ‘ಮುಂಬೈ ಮತ್ತು ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳ ಮೂಲಕ ವಾಂಖೆಡೆ ತನ್ನ ಮೊಬೈಲ್ ಫೋನ್ಗಳನ್ನು ಅಕ್ರಮವಾಗಿ ಕದ್ದಾಲಿಸುತ್ತಿದ್ದಾರೆ’ ಎಂದು ದೂರಿದ್ದಾರೆ.
ವಾಂಖೆಡೆ ಅವರು ತಮ್ಮ ಕುಟುಂಬದ ಸದಸ್ಯರ ಕರೆ ವಿವರಗಳನ್ನು (ಸಿಡಿಆರ್) ಪೊಲೀಸರಿಂದ ಕೇಳಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.
ವಾಂಖೆಡೆಯ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಎನ್ಸಿಬಿ ಒಳಗಿನಿಂದಲೇ ಯಾರೋ ಬರೆದಿರುವ ಪತ್ರವನ್ನು ಸಂಸ್ಥೆಯ ಮಹಾ ನಿರ್ದೇಶಕ ಎಸ್.ಎನ್ ಪ್ರಧಾನ್ ಅವರಿಗೆ ರವಾನಿಸಿರುವುದಾಗಿ ಮಲಿಕ್ ಹೇಳಿದ್ದಾರೆ.
ಡ್ರಗ್ಸ್ ವಿರೋಧಿ ಏಜೆನ್ಸಿಯೊಳಗೆ ‘ಸುಲಿಗೆ ದಂಧೆ’ ನಡೆಸಲಾಗುತ್ತಿದೆ ಎಂದು ದೂರಿರುವ ಅವರು, ಪತ್ರದಲ್ಲಿರುವ 26 ಆರೋಪಗಳ ಬಗ್ಗೆ ಎನ್ಸಿಬಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದಾರೆ.