ಬಿಜಾಪುರ (ಛತ್ತೀಸಗಢ): ಏಳು ದಿನಗಳ ಹಿಂದೆ ಕಾಣೆಯಾಗಿದ್ದ ಛತ್ತೀಸಗಡ ಸಶಸ್ತ್ರ ಪಡೆಯ ಯೋಧನನ್ನು ಬಿಜಾಪುರ ಜಿಲ್ಲೆಯ ಪ್ಯಾಡೆಡಾ ಗ್ರಾಮದ ಸಮೀಪ ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಕಮಲೋಚನ್ ಕಶ್ಯಪ್ ಶುಕ್ರವಾರ ತಿಳಿಸಿದ್ದಾರೆ.
'ನಕ್ಸಲರು ಬಿಜಾಪುರದಲ್ಲಿ ಯೋಧನನ್ನು ಅಪಹರಿಸಿ ಕೊಂದು ಶವವನ್ನು ಗಂಗಲೂರು-ಬಿಜಾಪುರ ರಸ್ತೆಯಲ್ಲಿ ಎಸೆದಿದ್ದಾರೆ. ಕಳೆದ ಏಳು ದಿನಗಳಿಂದ ಯೋಧ ಕಾಣೆಯಾಗಿದ್ದರು' ಎಂದು ಬಿಜಾಪುರದ ಎಸ್ಪಿ ತಿಳಿಸಿದ್ದಾರೆ.
ಮೃತ ಯೋಧನನ್ನು ಮಲ್ಲುರಾಮ್ ಸೂರ್ಯವಂಶಿ ಎಂದು ಗುರುತಿಸಲಾಗಿದ್ದು, ಛತ್ತೀಸಗಡ ಸಶಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ಹತ್ಯೆಯ ಹೊಣೆಯನ್ನು ಗಂಗಲೂರ್ ಪ್ರದೇಶ ಸಮಿತಿಯು ಹೊತ್ತುಕೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.