ಮುಂಬೈ: ‘ನಟಿ ಕಂಗನಾ ರನೌತ್ ಕಾನೂನನ್ನೂ ಮೀರಿದವರಲ್ಲ. ಒಂದು ವೇಳೆ ಅವರೇನಾದರೂ ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಎನ್ಸಿಬಿ ತನಿಖೆ ನಡೆಸಬೇಕು,’ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಬುಧವಾರ ಹೇಳಿದ್ದಾರೆ.
‘ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ತನಿಖೆ ನಡೆಸಬೇಕು. ಕಾನೂನು ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೇ’ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ದಾರೇಕರ್ಸುದ್ದಿಗಾರರಿಗೆ ತಿಳಿಸಿದರು.
ನಟ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ‘ಕಂಗನಾ ಡ್ರಗ್ಸ್ ಸೇವಿಸುತ್ತಾರೆ,’ ಎಂದು ಆರೋಪಿಸಿದ್ದರು. ಈ ಆರೋಪದ ಕುರಿತು ತನಿಖೆ ನಡೆಸುವಂತೆ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರಿಗೆ ಸೂಚಿಸಿತ್ತು.
ಬಾಲಿವುಡ್ ಮತ್ತು ಡ್ರಗ್ಸ್ ಸಂಬಂಧದ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ. ಈ ಸಂಬಂಧ ನಟಿ ರಿಯಾ ಚಕ್ರವರ್ತಿಯವರನ್ನು ಈಗಾಗಲೇ ಬಂದಿಸಿದೆ. ಆಕೆಯ ಪ್ರಿಯಕರ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಬಿಐ ಆ ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಮಧ್ಯೆ ಎನ್ಸಿಬಿ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನು ವಿಚಾರಣೆಗೆ ಕರೆದಿದೆ.