ಜೈಪುರ: ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ಪ್ರಕರಣ ಚರ್ಚೆಯಲ್ಲಿ ಇರುವಾಗಲೇ ದಲಿತ ಶಿಕ್ಷಕಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ವರದಿಯಾಗಿದೆ. ಈ ಘಟನೆ ಬಗ್ಗೆ ವರದಿ ನೀಡುವಂತೆ ರಾಜಸ್ಥಾನ ಸರ್ಕಾರಕ್ಕೆಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (ಎನ್ಸಿಎಸ್ಸಿ) ಸೂಚಿಸಿದೆ.
ಹಣಕಾಸು ಗಲಾಟೆಯ ಹಿನ್ನೆಲೆಯಲ್ಲಿ 34 ವರ್ಷದ ಶಿಕ್ಷಕಿ ಅನಿತಾ ರೇಗಾರ್ಗೆ ಆಕೆಯ ಸಂಬಂಧಿಗಳೇ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ಸಂಪೂರ್ಣ ಮಾಹಿತಿ ನೀಡುವಂತೆಎನ್ಸಿಎಸ್ಸಿ ಸರ್ಕಾರಕ್ಕೆ ಸೂಚಿಸಿದೆ.
#Horrific Another terrible incident happened in Rajasthan's Jaipur. A female #Dalit teacher was burnt alive. She died in the hospital due to severe burns due to fire. pic.twitter.com/POOMntLU8a
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೃತಳು ತನ್ನ ಸಂಬಂಧಿಕರಿಗೆ ₹2.5 ಲಕ್ಷ ಸಾಲ ನೀಡಿದ್ದರು. ಈ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಆನಿತಾ ಜೊತೆಗೆ ಜಗಳ ಮಾಡಿದ್ದರು. ಈ ಸಂಬಂಧ ಅನಿತಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಗಸ್ಟ್ 10ರಂದು ಅನಿತಾ ಮತ್ತೆ ತನ್ನ ಸಂಬಂಧಿಕರಿಗೆ ಹಣ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಅವರು ಅನಿತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನಿತಾ ಬುಧವಾರ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ಇಲ್ಲಿನ ಜೈಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಅನಿತಾ ಆಸ್ಪತ್ರೆಯಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ಹಲವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.