ಗುವಾಹಟಿ: ಜುಲೈನಲ್ಲಿ ಈಶಾನ್ಯ ರಾಜ್ಯಗಳ ಗಡಿಯಲ್ಲಿ ನಡೆದ ಮಾರಕ ಘರ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಕೇಂದ್ರ ಸರ್ಕಾರ, ಅಸ್ಸಾಂ ಮತ್ತು ಮಿಜೋರಾಂಗೆ ನೋಟಿಸ್ ನೀಡಿದ್ದು, ‘ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿದೆ’ ಎಂದು ಸೋಮವಾರ ಆರೋಪಿಸಿದೆ.
ಅಸ್ಸಾಮಿನ ಎಂ.ಡಿ. ಹಿಂಜಾಮುಲ್ ಹಕ್ ಎನ್ನುವವರು ಸಲ್ಲಿಸಿದ ದೂರಿಗೆ ಮೇರೆಗೆ ಎನ್ಎಚ್ಆರ್ಸಿಯು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಅಸ್ಸಾಂ, ಮಿಜೋರಾಂನ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದು, ಈ ಸಂಬಂಧ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.
‘ಪ್ರಕರಣವನ್ನು ಎನ್ಎಚ್ಆರ್ಸಿಯು ಗಂಭೀರವಾಗಿ ಪರಿಗಣಿಸಿದೆ. ಘರ್ಷಣೆಯಲ್ಲಿ ಪೊಲೀಸರ ಸಾವು–ನೋವುಗಳ ಕುರಿತು ದೂರುದಾರರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಸತ್ತವರು ಮತ್ತು ನೋವುಂಡವರ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನೂ ಆಯೋಗವು ಪರಿಗಣಿಸಿದೆ’ ಎಂದು ಮೂಲಗಳು ತಿಳಿಸಿವೆ.
ಜುಲೈ 26ರಂದು ಅಸ್ಸಾಂ–ಮಿಜೋರಾಂ ನಡುವಿನ ಗಡಿವಿವಾದವು ಹಿಂಸಾಚಾರಕ್ಕೆ ತಿರುಗಿ, ಘರ್ಷಣೆಯಲ್ಲಿ ಅಸ್ಸಾಂನ ಆರು ಪೊಲೀಸರು ಮತ್ತು ಒಬ್ಬ ನಾಗರಿಕ ಸಾವನ್ನಪಿದ್ದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.