ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳದ ಮೇಲಿನ ನಿಷೇಧ ಅನಿವಾರ್ಯವಲ್ಲ: ಫೇಸ್‌ಬುಕ್‌ ಇಂಡಿಯಾ ಮುಖ್ಯಸ್ಥ

Last Updated 17 ಡಿಸೆಂಬರ್ 2020, 3:45 IST
ಅಕ್ಷರ ಗಾತ್ರ

ನವದೆಹಲಿ: ಬಜರಂಗದಳದ ಮೇಲೆ ನಿಷೇಧ ಹೇರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲವೆಂದು ತಮ್ಮ ಕಂಪನಿಯ ಸತ್ಯ ಪರಿಶೀಲನಾ ತಂಡವು ದೃಢಪಡಿಸಿದೆ ಎಂದು ಫೇಸ್‌ಬುಕ್‌ ಇಂಡಿಯಾ ಮುಖ್ಯಸ್ಥ ಅಜಿತ್‌ ಮೋಹನ್‌ ತಿಳಿಸಿದ್ದಾರೆ. ಈ ವಿಚಾರವಾಗಿ ಸಂಸದೀಯ ಸಮಿತಿಗೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ಜೂನ್‌ ತಿಂಗಳಲ್ಲಿ ದೆಹಲಿಯ ಚರ್ಚ್‌ ಒಂದರ ಮೇಲೆ ದಾಳಿ ನಡೆಸಿದ ವಿಡಿಯೊ ಅನ್ನು ಬಜರಂಗದಳವು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿತ್ತು. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ತಿಳಿದುಬಂದಿದ್ದರೂ, ಬಜರಂಗದಳವನ್ನು ನಿಷೇಧಿಸಲು ಫೇಸ್‌ಬುಕ್‌ ಹಿಂದೇಟು ಹಾಕಿತ್ತು.

ಬಜರಂಗದಳವನ್ನು ನಿಷೇಧಿಸಿದರೆ ಕಂಪನಿಯ ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಫೇಸ್‌ಬುಕ್‌ ಕಂಪನಿಗೆ ಇತ್ತೆಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿತ್ತು.

'ನಾಗರಿಕರ ದತ್ತಾಂಶ ಸುರಕ್ಷತೆ' ಬಗೆಗಿನ ವಿಚಾರಣೆಗೆ ಹಾಜರಾಗುವಂತೆ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯು ಅಜಿತ್‌ ಮೋಹನ್‌ ಅವರಿಗೆ ಸೂಚಿಸಿತ್ತು.

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸಮಿತಿಯು ಬಜರಂಗದಳದ ವಿಚಾರವಾಗಿ ಫೇಸ್‌ಬುಕ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಪ್ರಶ್ನೆ ಮಾಡಿದೆ.

ಬಜರಂಗದಳದ ಪೋಸ್ಟ್‌ನಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಕಂಡುಬಂದಿಲ್ಲ. ಆ ಕಾರಣ, ಸಂಘಟನೆಯನ್ನು ನಿಷೇಧಿಸಿಸುವ ಅನಿವಾರ್ಯತೆ ಫೇಸ್‌ಬುಕ್‌ ಇಂಡಿಯಾ ಕಂಪನಿಗೆ ಇರಲಿಲ್ಲವೆಂದು ಅಜಿತ್‌ ಮೋಹನ್‌ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT