ನವದೆಹಲಿ:'ಕೋವಿಶೀಲ್ಡ್' ಕೋವಿಡ್ ಲಸಿಕೆ ಡೋಸೇಜ್ ನಡುವಣ ಅಂತರದಲ್ಲಿ ತಕ್ಷಣ ಬದಲಾವಣೆ ಅಗತ್ಯವಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಡೋಸ್ಗಳ ನಡುವಿನ ಅಂತರದ ಬಗ್ಗೆ ಆತಂಕಪಡಬೇಕಿಲ್ಲ ಎಂದು ಹೇಳಿದೆ.
ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಎರಡು ಡೋಸ್ಗಳ ನಡುವೆ ಅಂತರವನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಒತ್ತಿ ಹೇಳಿದೆ.
ರೂಪಾಂತರಗಳು ಹರಡುವ ಹಿನ್ನೆಲೆಯಲ್ಲಿ ಎರಡು ಡೋಸ್ಗಳ ನಡುವಣ ಅಂತರವನ್ನು ಕಡಿಮೆ ಮಾಡುವುದು ಉತ್ತಮ ಎಂಬ ಇತ್ತೀಚಿನ ಅಧ್ಯಯನವರದಿಗಳನ್ನು ಮಾಧ್ಯಮಗಳು ಉಲ್ಲೇಖಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪೌಲ್, ಇಂತಹ ಕಳವಳಗಳ ಬಗ್ಗೆ ಸಮತೋಲನ ಕಾಪಾಡುವ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ:ಕೋವಿಶೀಲ್ಡ್ನಿಂದ ಹೆಚ್ಚಿನ ರಕ್ಷಣೆ: ಅಧ್ಯಯನ ವರದಿ
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ತಕ್ಷಣಕ್ಕೆ ಡೋಸೇಜ್ಗಳ ನಡುವಣ ಬದಲಾವಣೆಗೆ ಸಂಬಂಧಿಸಿದಂತೆ ಗಾಬರಿಯಾಗುವ ಅಗತ್ಯವಿಲ್ಲ. ಈ ಎಲ್ಲ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಡೋಸೇಜ್ ನಡುವಣ ಅಂತರವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಮೊದಲ ಡೋಸ್ ಪಡೆಯಲು ಸಾಧ್ಯವಾಗುತ್ತದೆ.ಅಲ್ಲದೆ ಹೆಚ್ಚಿನ ಜನರಿಗೆ ರೋಗನಿರೋಧಕ ಶಕ್ತಿಯನ್ನು ನೀಡಲು ನೆರವಾಗುತ್ತದೆ' ಎಂದು ಹೇಳಿದ್ದಾರೆ.
'ಈ ಎಲ್ಲ ಕಳವಳಗಳನ್ನು ನಾವು ಸಮತೋಲದಲ್ಲಿಡಬೇಕಿದೆ. ಆದ್ದರಿಂದ ದಯವಿಟ್ಟು ನೆನಪಿಡಿ. ನಾವು ಸಾರ್ವಜನಿಕ ವಲಯದಲ್ಲಿ ಈ ಕುರಿತು ಸಂವಾದ ಹೊಂದಬಹುದು. ಆದರೂ ಈ ಬಗ್ಗೆ ತಿಳುವಳಿಕೆ ಉಳ್ಳವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹಾಗಾಗಿ ದಯವಿಟ್ಟು ಅವರ ನಿರ್ಧಾರವನ್ನು ಗೌರವಿಸಿ' ಎಂದಿದ್ದಾರೆ.
ಈ ನಿಟ್ಟಿನಲ್ಲಿ ಸಂವಾದವನ್ನು ಸ್ವಾಗತಿಸಿರುವ ಪೌಲ್, ಇಂತಹ ನಿರ್ಣಯ ತೆಗೆದುಕೊಳ್ಳುವ ಮುನ್ನ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್ಟಿಎಜಿಐ) ನಿರ್ಧಾರವನ್ನು ಗೌರವಿಸಬೇಕು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.