ಕೋಲ್ಕತ್ತ: ವಯಸ್ಕಳು ತನ್ನ ಇಚ್ಛೆಯಂತೆ ಮದುವೆಯಾದರೆ ಅಥವಾ ಮತಾಂತರವಾಗಲು ನಿರ್ಧರಿಸಿದರೆ, ಯಾರು ಕೂಡ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಹೇಳಿದೆ.
ಮಗಳು ಬೇರೆ ಧರ್ಮದ ಯುವಕನ ಪ್ರಭಾವಕ್ಕೊಳಗಾಗಿ ಆತನ ಜತೆ ಮದುವೆಯಾಗಿದ್ದಾಳೆ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಿಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠವು ಈ ಅಭಿಪ್ರಾಯಪಟ್ಟಿದೆ.
19 ವರ್ಷದ ಮಹಿಳೆಯು ತನ್ನ ಇಚ್ಛೆಯಂತೆ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ಆದರೆ ಆಕೆಯ ತಂದೆ, ‘ನ್ಯಾಯಾಧೀಶರ ಮುಂದೆ ನನ್ನ ಮಗಳ ಹೇಳಿಕೆ ದಾಖಲಿಸಿಲ್ಲ’ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ವ್ಯಕ್ತಿ ದಾಖಲಿಸಿದ್ದ ಎಫ್ಐಆರ್ನಂತೆ ಪೊಲೀಸರು ಮಹಿಳೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಮಹಿಳೆ ತಾನು ತನ್ನ ಇಚ್ಛೆಯಂತೆ ಮದುವೆಯಾಗಿರುವುದಾಗಿ ತಿಳಿಸಿದ್ದರು.