ನವದೆಹಲಿ: ರಾಜ್ಯದಲ್ಲಿರುವ ಮರಾಠಾ ಸಮುದಾಯದವರೂ ಕನ್ನಡಿಗರೇ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5ರಂದು ನಡೆಸಲು ನಿರ್ಧರಿಸಿರುವ ಕರ್ನಾಟಕ ಬಂದ್ಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮರಾಠಾ ಸಮುದಾಯದವರು ಬೆಳಗಾವಿಯಲ್ಲಿ ಮಾತ್ರ ಇಲ್ಲ. ಅಲ್ಲದೆ, ಬೆಳಗಾವಿಯ ಮರಾಠಿಗರು ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲವನ್ನೂ ನೀಡಿದ್ದರು ಎಂದ ಅವರು, ಮರಾಠಾ ಸಮುದಾಯದಲ್ಲಿನ ಹಿಂದುಳಿದವರ ನೆರವಿಗೆ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದರು.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗಡಿ ಸಮಸ್ಯೆ ಕುರಿತು ಮತ್ತೆ ಕ್ಯಾತೆ ತೆಗೆದಿದ್ದಾರೆ. ರಾಜ್ಯಗಳ ಗಡಿಯ ಕುರಿತು ಮಹಾಜನ್ ಆಯೋಗದ ವರದಿಯೇ ಅಂತಿಮ. ಅಣ್ಣ- ತಮ್ಮಂದಿರಂತೆ ಇರುವ ಮರಾಠಾ ಮತ್ತು ಕನ್ನಡಿಗರ ನಡುವೆ ದ್ವೇಷ ಭಾವ ಹುಟ್ಟು ಹಾಕುವುದನ್ನು ಸಹಿಸಲಾಗದು ಎಂದು ಅವರು ಎಚ್ಚರಿಕೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಕುರಿತು ಚರ್ಚಿಸಲು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಲಾಗುವುದು. ಅವರೊಂದಿಗಿನ ಭೇಟಿಯ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಡಿಸೆಂಬರ್ 7ರಿಂದ ವಿಧಾನ ಮಂಡಲ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಹಾಜರಿದ್ದರು.