ಒಡಿಸ್ಸಿ ನೃತ್ಯಗುರು ರಾವುತ್ ಮನೆ ಖಾಲಿ ಮಾಡಿಸಿದ ಅಧಿಕಾರಿಗಳು
ನವದೆಹಲಿ (ಪಿಟಿಐ): ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯಗುರು, 90 ವರ್ಷದ ಮಾಯಾಧರ ರಾವುತ್ ಅವರು ತಮಗೆ ಹಂಚಿಕೆಯಾಗಿದ್ದ ಸರ್ಕಾರಿ ಬಂಗಲೆಯಲ್ಲಿ ಊಟ ಮಾಡುತ್ತಿದ್ದಾಗ ಭೇಟಿ ನೀಡಿದ ಅಧಿಕಾರಿಗಳ ತಂಡ, ತಡಮಾಡದೇ ಮನೆ ತೆರವು ಮಾಡಿಸಿದೆ.
‘ಊಟ ಮುಗಿಸಲು 10 ನಿಮಿಷದಷ್ಟೂ ಕಾಲಾವಕಾಶ ನೀಡದ ಅಧಿಕಾರಿಗಳು, ಏಷ್ಯನ್ ಗೇಮ್ಸ್ ವಿಲೇಜ್ನ ಮನೆಯಿಂದ ಹೊರದಬ್ಬಿದರು’ ಎಂದು ಮಾಯಾಧರ ಅವರ ಪುತ್ರಿ ಮಧುರಿಮಾ ಅವರು ಗುರುವಾರ ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆ ತಮ್ಮ ತಂದೆ ಮನೆಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
‘ಈ ಘಟನೆಯನ್ನು ಜಡವಾಗಿ ನಾನು ನೋಡುತ್ತಿದ್ದೆ. 90 ವರ್ಷದ ತಂದೆಗೆ ಎದುರಾದ ಈ ಸ್ಥಿತಿ ಕಂಡು ಕಣ್ಣೀರು ಬಂತು. ಅವರು ಆಸ್ತಮಾ, ದೃಷ್ಟಿದೋಷ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಎರಡು ನಿಮಿಷವಾದರೂ ಸಮಯ ನೀಡಿ ಎಂದು ಕೇಳಿಕೊಂಡರೂ ಅವಕಾಶ ಸಿಗಲಿಲ್ಲ’ ಎಂದು ಮಧುರಿಮಾ ಆರೋಪಿಸಿದ್ದಾರೆ.
ರಾವುತ್ ಅವರು ಕೋಲು ಹಿಡಿದು ನಡೆದುಹೋಗುತ್ತಿರುವ ಹಾಗೂ ಅವರಿಗೆ ಸಂದ ಪದ್ಮ ಪ್ರಶಸ್ತಿ ಹಾಗೂ ಇನ್ನಿತರ ವಸ್ತುಗಳು ಮನೆಯ ಹೊರಗಡೆ ಬಿದ್ದಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವಂತೆ ಸರ್ಕಾರವು 8 ಖ್ಯಾತ ಕಲಾವಿದರಿಗೆ 2014ರಲ್ಲಿಯೇ ಸೂಚಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.