ಶಿವಸಾಗರ್, ಅಸ್ಸಾಂ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಒಎನ್ಜಿಸಿಯ ಮೂವರು ನೌಕರರನ್ನು ಶಂಕಿತ ಉಲ್ಫಾ ಉಗ್ರರು ಬುಧವಾರಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ ಜಿಲ್ಲೆಯ ಲಕ್ವಾ ತೈಲಕ್ಷೇತ್ರದಿಂದ ಅಪಹರಿಸಿದ್ದಾರೆ ಎಂದು ತೈಲ ಕಂಪನಿಯ ಪ್ರಕಟಣೆ ತಿಳಿಸಿದೆ.
ಶಿವಸಾಗರದ ಲಕ್ವಾ ಕ್ಷೇತ್ರದ ಒಎನ್ಜಿಸಿಯ ರಿಗ್ ಸೈಟ್ನಿಂದ ಮೂವರು ನೌಕರರನ್ನು ಬುಧವಾರ ಮುಂಜಾನೆ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಉತ್ಪಾದನಾ ವಿಭಾಗದ ಕಿರಿಯ ತಂತ್ರಜ್ಞರಾದ ಎಂಎಂ ಗೊಗೊಯ್ ಮತ್ತು ರಿತುಲ್ ಸೈಕಿಯಾ ಹಾಗೂ ಸಹಾಯಕ ಜೂನಿಯರ್ ಎಂಜಿನಿಯರ್ ಅಲಕೇಶ್ ಸೈಕಿಯಾ ಅಪಹೃತಗೊಂಡಿರುವ ನೌಕರರು ಎಂದು ಒಎನ್ಜಿಸಿ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಈ ನೌಕರರನ್ನು ಒಎನ್ಜಿಸಿಗೆ ಸೇರಿದ ವಾಹನದಲ್ಲೇ ಅಪಹರಿಸಲಾಗಿದೆ. ಆ ವಾಹನವನ್ನು ಅಸ್ಸಾಂ–ನಾಗಾಲ್ಯಾಂಡ್ ಗಡಿಯ ಸಮೀಪದ ನಿಮೊನಗಡ ಅರಣ್ಯದ ಬಳಿ ಪತ್ತೆಯಾಗಿದೆ‘ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಅಪಹರಣದ ಹಿಂದೆ ಶಂಕಿತ ಉಲ್ಫಾ ಉಗ್ರರ ಕೈವಾಡವಿದ್ದು, ಅವರು ನಾಗಲ್ಯಾಂಡ್ ಮೂಲಕ ಪರಾರಿಯಾಗಿದ್ದಾರೆ ಎಂದು ಶಿವಸಾಗರ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ನಂತರ ಪೂರ್ಣ ವಿಷಯ ತಿಳಿಯಲಿದೆ‘ ಎಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಎನ್ಜಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ತನಿಖೆ ಮುಂದುವರಿದಿದೆ.